ಕೆ.ಕೆ. ಶೆಟ್ಟಿ, ಕೇಶವ ಭಟ್ಟರಿಗೆ ಪೊಳಲಿ ಶಂಕರನಾರಾಯಣ ಶಾಸ್ತ್ರಿ ಪ್ರಶಸ್ತಿ

– ಭಾಸ್ಕರ ರೈ ಕುಕ್ಕುವಳ್ಳಿ 

 

ಯಕ್ಷಗಾನ ತಾಳಮದ್ದಳೆ ಕ್ಷೇತ್ರದ ಹಳೆ ತಲೆಮಾರಿನಲ್ಲಿ ಕೆ.ಪಿ.ವೆಂಕಪ್ಪ ಶೆಟ್ಟಿ, ಪೊಳಲಿ ಶಂಕರನಾರಾಯಣ ಶಾಸ್ತ್ರಿ ಮತ್ತು ನಾರಾಯಣ ಕಿಲ್ಲೆಯವರದು ಅಗ್ರ ಪಂಕ್ತಿಯ ಹೆಸರು. ಅಲ್ಲಿಂದ ವಿದ್ವಜ್ಜನ ವಲಯದಲ್ಲಿ ಜನಪ್ರಿಯವಾದ ತಾಳಮದ್ದಳೆ ಕಲಾ ಪ್ರಕಾರ ಶೇಣಿ. ಸಾಮಗರ ಯುಗದಲ್ಲಿ ವಿಸ್ತಾರಗೊಂಡು ಈಗ ವ್ಯಾಪಕವಾಗಿ ಬೆಳೆದು ನಿಂತಿದೆ ಎನ್ನಬಹುದು. ಯಕ್ಷಗಾನದ ವಾಚಿಕ ವಿಭಾಗಕ್ಕೆ ಕಸುವು ತುಂಬಿದ ಹಿರಿಯರನ್ನು ಮರೆಯದೆ ಇರುವುದು ಈ ಕಾಲದವರ ಕರ್ತವ್ಯವೂ ಹೌದು. ಆದರೆ ಅಂತಹವರ ಸ್ಮರಣೆ ಮುಂದಿನ ತಲೆಮಾರಿಗೆ ದಾರಿ ತೋರುವಂತಿರ ಬೇಕು ಎಂಬ ಎಚ್ಚರ ಅಗತ್ಯ. ಪೊಳಲಿ ಸ್ಮಾರಕ ಸಮಿತಿ ಹುಟ್ಟು ವಡೆದದ್ದೇ ಈ ಎಚ್ಚರದಿಂದ.

ತಾಳಮದ್ದಳೆಯ ನವೋದಯದ ನೇತಾರರಲ್ಲಿ ಒಬ್ಬರಾದ ಯಕ್ಷಗಾನ ವಾಚಸ್ಪತಿ ದಿ| ಪೊಳಲಿ ಶಂಕರನಾರಾಯಣ ಶಾಸ್ತ್ರಿ ಅವರು ಯಕ್ಷಗಾನ ಅರ್ಥಗಾರಿಕೆ ಮತ್ತು ಪುರಾಣ ಪ್ರವಚನ ಕ್ಷೇತ್ರಕ್ಕೆ ಅಸಾಮಾನ್ಯ ಕೊಡುಗೆ ನೀಡಿದ ವಿದ್ವಾಂಸರು. 1930-1970ರ ಅವಧಿಯಲ್ಲಿ ಉಭಯ ಕ್ಷೇತ್ರಗಳಲ್ಲಿ ಅವರು ಮಾಡಿದ ಸೇವೆ ಅವಿಸ್ಮರಣೀಯ. ಅವರ ನಿಧನಾನಂತರ 1975ರಲ್ಲಿ ಆರಂಭಗೊಂಡ ಪೊಳಲಿ ಶಾಸ್ತ್ರಿ ಸ್ಮಾರಕ ಸಮಿತಿ ‘ಯಕ್ಷಗಾನ ಮಕರಂದ’ಎಂಬ ಸಂಸ್ಮರಣಾ ಗ್ರಂಥವನ್ನು ಪ್ರಕಟಿಸಿತು. ಅದು ಇಂದಿಗೂ ಯಕ್ಷಗಾನಕ್ಕೊಂದು ಆಕರಗ್ರಂಥವಾಗಿ ಉಳಿದಿದೆ. ಇದರೊಂದಿಗೆ ಪ್ರತಿ ವರ್ಷ ಯಕ್ಷಗಾನ ತಾಳಮದ್ದಳೆ ಮತ್ತು ಪ್ರವಚನ ಕ್ಷೇತ್ರದ ಅರ್ಹ ಕಲಾವಿದರೊಬ್ಬರನ್ನು ಪೊಳಲಿ ಶಾಸ್ತ್ರಿ ಪ್ರಶಸ್ತಿಯೊಂದಿಗೆ ಸಮಿತಿ ಗೌರವಿಸುತ್ತಾ ಬಂದಿದೆ.

ಈ ಹಿಂದಣ ವರ್ಷಗಳಲ್ಲಿ ಮಲ್ಪೆ ಶಂಕರ ನಾರಾಯಣ ಸಾಮಗ, ತಲ್ಲಂಗಡಿ ಪರಮೇಶ್ವರಿ ಶೆಡ್ತಿ, ಪೆರ್ಲಕೃಷ್ಣ ಭಟ್, ಕುಬೆವೂರು ಪುಟ್ಟಣ್ಣ ಶೆಟ್ಟಿ, ಕೆ.ಕಾಂತರೈ, ತೆಕ್ಕಟ್ಟೆ ಆನಂದ ಮಾಸ್ತರ್, ಜಿ. ಪರಮೇಶ್ವರ ಭಟ್, ಅಡ್ಡೆ ವಾಸು ಶೆಟ್ಟಿ,ಮಲ್ಪೆ ರಾಮದಾಸ ಸಾಮಗ, ಎಂ.ಆರ್. ಶಾಸ್ತ್ರಿ, ಬಾಳಗುತ್ತು ದೂಮಣ್ಣ ಶೆಟ್ಟಿ, ಹೊಸಬೆಟ್ಟು ನಾರಾಯಣ ರಾವ್, ಬಿ.ಜಯರಾಮ ಶೆಟ್ಟಿ ತೋಡಾರು, ಅಷ್ಟಾವಧಾನಿ ಡಾ.ಆರ್.ಗಣೇಶ್, ಎಂ.ಎಲ್. ರಾಮಚಂದ್ರ ರಾವ್, ಬೆಳ್ಳಾರೆ ಕಿಟ್ಟಣ್ಣರೈ, ಸೀತಾರಾಮ ಕರುಣಾಕರ, ಕುಂಬಳೆ ಸುಂದರರಾವ್, ಎಂ.ಆರ್. ಲಕ್ಷ್ಮೀ ನಾರಾಯಣ, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಬಿ.ಚಂದ್ರಶೇಖರ ರಾವ್, ಅಂಬಾತನಯ ಮುದ್ರಾಡಿ, ಡಾ. ಡಿ. ಸದಾಶಿವ ಭಟ್, ಸಿದ್ಧಕಟ್ಟೆ ವಾಸು ಶೆಟ್ಟಿ, ಲಕ್ಷ್ಮೀಶ ತೋಳ್ಪಾಡಿ, ಡಾ. ರಮಾನಂದ ಬನಾರಿ, ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ, ಪಿ. ಪರಮೇಶ್ವರ ಐತಾಳ್ ಮೊದಲಾದ ಘಟಾನುಘಟಿಗಳಿಗೆ ಈ ಪ್ರಶಸ್ತಿ ಸಂದಿದೆ. ಅಲ್ಲದೆ ಉಡುಪಿಯ ಪಾವಂಜೆ ಗುರು ರಾವ್‌ ಆ್ಯಂಡ್ ಸನ್ಸ್ ಪ್ರಕಾಶನ ಸಂಸ್ಥೆಗೆ ಶಾಸ್ತ್ರಿ ಶತಮಾನೋತ್ಸವ ಪ್ರಶಸ್ತಿಯನ್ನು ನೀಡಲಾಗಿದೆ. ಇದೀಗ 2017 ಮತ್ತು 2018 ರ ಸಾಲಿನಲ್ಲಿ ಪೊಳಲಿ ಶಾಸ್ತ್ರಿ ಪ್ರಶಸ್ತಿಯನ್ನು ಇಬ್ಬರು ಹಿರಿಯ ಸಾಧಕರು ಪಡೆದಿದ್ದಾರೆ.  ಅವರಲ್ಲಿ ಒಬ್ಬರು ಮುಂಬಯಿಯ ಕೆ.ಕೆ. ಶೆಟ್ಟರು; ಇನ್ನೋರ್ವರು ಬರೆ ಕೇಶವ ಭಟ್ಟರು.

ಕೆ.ಕೆ. ಶೆಟ್ಟಿ ಮುಂಬಯಿ :

ಪಡುಬಿದ್ರಿ ನಡ್ಸಾಲಿನ ಕೃಷಿಕ ಕುಟುಂಬದಲ್ಲಿ ಜನಿಸಿದ ಕೆ.ಕುಟ್ಟಿ ಶೆಟ್ಟರು ಅವರಾಲ್ ಮಟ್ಟಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿ 1950 ರಲ್ಲಿ ತನ್ನ ಹದಿನಾಲ್ಕನೇ ವಯಸ್ಸಿಗೆ ಮುಂಬಯಿ ಮಹಾನಗರವನ್ನು ಸೇರಿದರು. ಅಲ್ಲಿ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ದುಡಿಯುತ್ತಾ ಮೊಗವೀರ ರಾತ್ರಿ ಶಾಲೆಯಲ್ಲಿ ಕಲಿಕೆಯನ್ನು ಮುಂದುವರಿಸಿದರು. ಮುಂದೆ ಸ್ವತಂತ್ರ ಉದ್ಯಮವನ್ನು ನಡೆಸುವುದರೊಂದಿಗೆ ಹಲವು ಬಗೆಯ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಕೊಂಡರು.

ಯಕ್ಷಗಾನ ತಾಳಮದ್ದಳೆಯ ಕಡೆ ಆಸಕ್ತರಾಗಿದ್ದ ಕೆ.ಕೆ.ಶೆಟ್ಟರು ಮಾಣಿಯೂರು ಶಂಕರ ಶೆಟ್ಟರ ಪ್ರೇರಣೆಯಿಂದ ಅರ್ಥಧಾರಿಯಾಗಿ ಬೆಳೆದರು. ಶ್ರೀ ಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿ ರೇರೋಡ್ ಮತ್ತು ಶ್ರೀ ಶಾರದಾ ಯಕ್ಷಗಾನ ಮಂಡಳಿ ಬೈಕಲಾ ಮೂಲಕ ಹಿರಿಯ ಕಿರಿಯ ಕಲಾವಿದರೊಂದಿಗೆ ತಮ್ಮ ಅರ್ಥಗಾರಿಕೆಯನ್ನು ಮುಂದುವರಿಸಿದರು. ಕರ್ಣ, ವಾಲಿ, ಜರಾಸಂಧ, ಕೌರವ, ಭೀಷ್ಮ, ಪರಶುರಾಮ, ಕೃಷ್ಣ, ಅರ್ಜುನ, ರಾವಣ ಮೊದಲಾದ ಪಾತ್ರಗಳಲ್ಲಿ ಖ್ಯಾತಿ ಗಳಿಸಿದರು.

ಮುಂಬಯಿಯಲ್ಲಿ ‘ಯಕ್ಷಮಿತ್ರ’  ಎಂಬ ಸಂಘಟನೆಯನ್ನು ಸ್ಥಾಪಿಸಿ ಪೆರಣಂಕಿಲ ಹರಿದಾಸ್ ಭಟ್, ಬಳ್ಕುಂಜೆ ಗೋಪಾಲ ಶೆಟ್ಟಿ, ಭಾಗವತ ಪೊಲ್ಯ ಲಕ್ಷ್ಮೀ ನಾರಾಯಣ ಶೆಟ್ಟಿ ಮೊದಲಾದವರ ಸಹಕಾರದಿಂದ ಮಹಾನಗರದ ವಿವಿದೆಡೆ ತಾಳಮದ್ದಳೆ ಕೂಟಗಳನ್ನು ಆಯೋಜಿಸಿದ ಶೆಟ್ಟರು ಕಲಾವಿದರ ಸಮ್ಮಾನ, ಸಂಸ್ಮರಣೆಗಳನ್ನು ನಡೆಸಿ ಯಕ್ಷರಸಿಕರ ಮನಗೆದ್ದರು. ಮುಂಬಯಿಯ ಯಕ್ಷಗಾನ ಸಂಸ್ಥೆಗಳಿಗೆ, ಊರಿನ ಕಲಾವಿದರಿಗೆ ಆಪ್ತರೆನಿಸಿದರು.

ಕಲಾವಿದರಿಗೆ ಆಪತ್ಕಾಲದಲ್ಲಿ ನೆರವಾಗುವುದಲ್ಲದೆ ಹಲವು ಬಡ ಮಕ್ಕಳಿಗೆ ವಿದ್ಯಾರ್ಜನೆಗಾಗಿ ಸಹಕರಿಸಿರುವುದು ಅವರ ಔದಾರ್ಯಕ್ಕೆ ಸಾಕ್ಷಿ. 1967 ರಲ್ಲಿ ನೇತ್ರಾವತಿ ಶೆಟ್ಟಿಪರಾರಿ ಬಳ್ಕುಂಜೆ ಅವರನ್ನು ವಿವಾಹವಾಗಿ ಓರ್ವ ವೈದ್ಯ ಪುತ್ರಿ ಮತ್ತು ಉದ್ಯಮಶೀಲರಾದ ಈರ್ವರು ಗಂಡು ಮಕ್ಕಳೊಂದಿಗೆ ಸಂತೃಪ್ತ ಜೀವನ ಸಾಗಿಸುತ್ತಿರುವ ಶೆಟ್ಟರು ಎಂಭತ್ತೆರಡರ ಹರೆಯದಲ್ಲೂ ಸಾರ್ವಜನಿಕ ರಂಗದಲ್ಲಿ ಸಕ್ರಿಯರು.

ಬರೆ ಕೇಶವ ಭಟ್ :

ಕೈರಂಗಳ ಸಮೀಪದ ಬರೆ ಎಂಬ ಗ್ರಾಮೀಣ ಪ್ರದೇಶದವರಾದ ಕೇಶವ ಭಟ್ಟರು ಅಧ್ಯಾಪಕರಾಗಿ ನಿವೃತ್ತರಾದವರು. ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲಿ ಅವರದು ಸುದೀರ್ಘ ಅನುಭವ. ಹಲವಾರು ಹಿರಿಯ, ಕಿರಿಯ ಅರ್ಥಧಾರಿಗಳ ಒಡನಾಟದಲ್ಲಿ ಸೊಗಸಾದ ಮಂಡನಾಕ್ರಮ ಹಾಗೂ ವಿದ್ವತ್ಪೂರ್ಣ ಅರ್ಥಗಾರಿಕೆಯಿಂದ ಮೆರೆದವರು. ಅವರ ಶ್ರೀ ರಾಮ, ಕೃಷ್ಣ, ಭೀಷ್ಮ, ದಶರಥ, ವಸಿಷ್ಠ, ಅತಿಕಾಯ, ಹನುಮಂತ, ಧರ್ಮರಾಜ, ಮಯೂರಧ್ವಜ, ಅರ್ಜುನ, ಹಂಸಧ್ವಜ ಮೊದಲಾದ ಪಾತ್ರಗಳು ಪ್ರಸಿದ್ಧವಾಗಿವೆ.

ಬರೆಕೇಶವ ಭಟ್ಟರು ಓರ್ವ ಅತ್ಯುತ್ತಮ ಪ್ರವಚನಕಾರ ಮತ್ತು ಲೇಖಕ. ಶ್ರೀ ಸತ್ಯನಾರಾಯಣ ವ್ರತ ಕಥೆಯ ನಿರೂಪಣೆಯಲ್ಲಿ ಅವರು ಖ್ಯಾತರು. ವಿಶಾಲ ಪುರಾಣಜ್ಞಾನ ಮತ್ತು ವಿಶಿಷ್ಟ ಶೈಲಿಯಿಂದ ತೂಕವುಳ್ಳ ಮಾತುಗಾರಿಕೆ ಅವರದು. ಅಡ್ಯನಡ್ಕದಲ್ಲಿ ಕಲಾಭಿಮಾನ ಬಳಗವೆಂಬ ಸಂಘಟನೆಯ ಸ್ಥಾಪಕರಾಗಿ, ಕೈರಂಗಳ ಶ್ರೀ  ಗೋಪಾಲ ಕೃಷ್ಣ ಭಜನಾ ಮಂಡಳಿಯ ಸ್ಥಾಪಕ ಕಾರ್ಯದರ್ಶಿಯಾಗಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಆರು ದಶಕಗಳ ಸೇವೆ ಸಲ್ಲಿಸಿದ ಸಾಧಕ ಬರೆ ಅವರು ಎಪ್ಪತ್ತಾರರ ಹರೆಯದಲ್ಲೂ ಪ್ರಸ್ತುತರು.

ಪ್ರಶಸ್ತಿ ಪ್ರದಾನ – ತಾಳಮದ್ದಳೆ :

ಪೊಳಲಿ ಶಾಸ್ತ್ರಿ ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 1 ರಂದು ಕುಳಾಯಿ ಶ್ರೀ  ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜರಗಿತು. ಸಮಿತಿ ಸಂಚಾಲಕ ಡಾ. ಎಂ. ಪ್ರಭಾಕರ ಜೋಶಿಯವರು ಶಾಸ್ತ್ರಿಗಳ ಬದುಕು-ಸಾಧನೆಗಳನ್ನು ವಿವರಿಸಿ ನುಡಿನಮನ ಸಲ್ಲಿಸಿದರು. ಪ್ರಶಸ್ತಿ ಸ್ವೀಕರಿಸಿದ ಕೆ.ಕೆ. ಶೆಟ್ಟರು, ‘ಜಿಲ್ಲೆಯಿಂದ ಹೊರಗಿದ್ದು ಯಕ್ಷಗಾನಕ್ಕೆ ಸಲ್ಲಿಸಿದ ಅಳಿಲ ಸೇವೆಯನ್ನು ಗುರುತಿಸಿ ಶಾಸ್ತ್ರಿಗಳ ಹೆಸರಿನಲ್ಲಿ ನೀಡಿರುವ ಗೌರವ ತನ್ನ ಜೀವನದ ಅವಿಸ್ಮರಣೀಯ ಕ್ಷಣ’ ಎಂದರು. ಬರೆ ಕೇಶವ ಭಟ್ಟರು ತಮ್ಮನ್ನು ಸಪತ್ನಿಕರಾಗಿ ಸನ್ಮಾನಿಸಿದುದಕ್ಕಾಗಿ ಭಾವುಕ ಉತ್ತರ ನೀಡಿದ್ದು, ಹೃದಯ ಸ್ಪರ್ಶಿಯಾಗಿತ್ತು.

ಈ ಕಾರ್ಯಕ್ರಮಕ್ಕಾಗಿಯೇ ಮುಂಬಯಿಯಿಂದ ಆಗಮಿಸಿದ ಹಿರಿಯ ಭಾಗವತ ಪೊಲ್ಯ ಲಕ್ಷ್ಮೀ ನಾರಾಯಣ ಶೆಟ್ಟರು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದುದು ವಿಶೇಷ. ಆ ಮೇಲೆ ಜರಗಿದ ‘ಶ್ರೀ  ಕೃಷ್ಣ ಸಂದೇಶ’ ತಾಳಮದ್ದಳೆಯಲ್ಲಿ ಅವರು ಭಾಗವತಿಕೆ ಮಾಡಿದ್ದು, ಪ್ರಮುಖ ಆಕರ್ಷಣೆಯಾಯಿತು. ಬಹಳ ಕಾಲದ ಬಳಿಕ ಪಿ. ವೆಂಕಟ್ರಮಣ ಐತಾಳರೂ ಹಾಡುಗಾರಿಕೆಯಲ್ಲಿ ಜತೆ ಗೂಡಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಸಮಿತಿಯ ಕಾರ್ಯದರ್ಶಿ ಮತ್ತು ಪೊಳಲಿ ಶಾಸ್ತ್ರಿಯವರ ಪುತ್ರರೂ ಆಗಿರುವ ಕಲಾವಿದ-ಪ್ರಸಂಗತಕರ್ತ ಪೊಳಲಿ ನಿತ್ಯಾನಂದ ಕಾರಂತರ ಸಂಯೋಜನೆಯಲ್ಲಿ ಒಟ್ಟು ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಿತು.

________________________________________________________________________________________________

  • ಭಾಸ್ಕರರೈ ಕುಕ್ಕುವಳ್ಳಿ ‘ವಿದ್ಯಾ’ಕದ್ರಿ ಕಂಬಳ ರಸ್ತೆ, ಬಿಜೈ, ಮಂಗಳೂರು-೫೭೫೦೦೪.
error: Content is protected !!
Share This