ಮಾಂಬಾಡಿ ಸುಬ್ರಹ್ಮಣ್ಯ ಭಟ್ 50 ವರ್ಷಗಳಿಂದ ಹಿಮ್ಮೇಳ ತರಬೇತಿ ನಡೆಸುತ್ತಾ ಬಂದಿದ್ದಾರೆ. ತೀರ್ಥರೂಪರಿಂದಲೇ ಹಿಮ್ಮೇಳ ಕರಗತ ಮಾಡಿಕೊಂಡ ಬಳಿಕ ಕಟೀಲು, ಕದ್ರಿ, ಧರ್ಮಸ್ಥಳ ಮೇಳಗಳಲ್ಲಿ ತಿರುಗಾಟ ನಡೆಸಿ ಇದೀಗ ಮೇಳದ ಬದುಕಿಗೆ ವಿರಾಮ ಹಾಡಿ ಆಸಕ್ತರಿಗೆ ಹಿಮ್ಮೇಳ ಕಲಿಸುತ್ತಿದ್ದಾರೆ.
ಚೆಂಡೆ ಮದ್ದಳೆ ಎರಡರಲ್ಲೂ ಅವರದ್ದು ಪಳಗಿದ ಕೈ. ಕಲಿಯಲು ಬರುವ ಪ್ರತಿಯೋರ್ವ ವಿದ್ಯಾರ್ಥಿಯನ್ನೂ ಹುರಿದುಂಬಿಸುತ್ತಾ ಆತನಿಗೆ ಧೈರ್ಯ ಆತ್ಮವಿಶ್ವಾಸ ತುಂಬುತ್ತಾ ಕಲಿಸುವ ಪರಿ ಅಮೋಘವಾದದ್ದು. ಆದ್ದರಿಂದಲೇ ಇಂದು ಒಂದು ಸಾವಿರಕ್ಕೂ ಮಿಕ್ಕ ಯಕ್ಷಗಾನ ಶಿಷ್ಯರನ್ನು ಹೊಂದಿರುವ ನಿಜಾರ್ಥದ ಗುರು.
ಮೀಯಪದವು ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಸೆಪ್ಟಂಬರ್ 8 ರಂದು ಜರಗುವ ವೇದಮೂರ್ತಿ ಗಣೇಶ ನಾವಡ ಹಾಗೂ ಬಳಗದವರ ಸೇವಾರೂಪದ ಉದಯೋನ್ಮುಖ ಭಾಗವತರ ಯಕ್ಷಗಾನಾರ್ಚನೆ ಜರಗಲಿದ್ದು ಈ ಸಂದರ್ಭ ಸುಬ್ರಹ್ಮಣ್ಯ ಭಟ್ ಅವರ ಕಲಾ ಸಾಧನೆಯನ್ನು ಸಮ್ಮಾನಿಸಿ ಗೌರವಿಸುವ ಮೂಲಕ ಗುರುವಂದನೆ ಸಲ್ಲಿಸಲಾಗುವುದು.
– ಯೋಗೀಶ ರಾವ್ ಚಿಗುರುಪಾದೆ
(ಉದಯವಾಣಿ)