ಜಗತ್ತಿನ ಪ್ರತೀ ಕಾಲಘಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪರಿವರ್ತನೆ ತರಬಲ್ಲಂತಹಾ ವ್ಯಕ್ತಿಗಳು ಬಂದುಬಿಡುತ್ತಾರೆ. ರಾಜಕೀಯ, ಕ್ರೀಡೆ, ಸಂಗೀತ, ಸಾಹಿತ್ಯ, ಸಾಮಾಜಿಕ ಹೀಗೆ ವಿಧ ವಿಧವಾದ ಕ್ಷೇತ್ರಗಳಲ್ಲಿ ವರ್ಚಸ್ವೀ ವ್ಯಕ್ತಿತ್ವಗಳು ತಾವಿರುವ ಕ್ಷೇತ್ರವನ್ನು ಆವರಿಸಿಬಿಡುವ ಪ್ರಭಾವವನ್ನು ಪಡೆದವರಾಗಿರುತ್ತಾರೆ. ಯಕ್ಷಗಾನ ಕ್ಷೇತ್ರದಲ್ಲಿ ದಿ. ಅಜ್ಜ ಬಲಿಪರು, ದಿ. ಶೇಣಿ ಗೋಪಾಲಕೃಷ್ಣ ಭಟ್, ದಿ. ಕಾಳಿಂಗ ನಾವಡ ಇತ್ಯಾದಿ. ಪ್ರಸ್ತುತ ಶ್ರೀ ಪಟ್ಲ ಸತೀಶ ಶೆಟ್ಟರನ್ನು ಕೂಡ ಈ ತೆರನಾದ “ಕಲಾವಿದನಾಗಿ” trend setting personality ಎಂದೆನ್ನಲು ಯಾವುದೇ ಅಡ್ಡಿ ಇಲ್ಲ. ಇದು ಶ್ರೀ ಸತೀಶ ಶೆಟ್ಟರ ಗಾಯನವನ್ನು ಮಾತ್ರ ಅನುಲಕ್ಷಿಸಿ ಹೇಳುವ ಮಾತು. ಅವರ ಸಾಮಾಜಿಕ ಕಳಕಳಿಯ ಕೆಲಸ ಕಾರ್ಯಗಳಿಂದಾಗಿ ಅವರಲ್ಲೀಗಾಗಲೇ ಇದ್ದ ಪ್ರಭೆಗೆ ಮತ್ತಷ್ಟೂ ಮೆರುಗು ಕೊಟ್ಟಿದೆ.

“ ಕಲಾವಿದನಾಗಿ” trend setting personality ಎಂದೆನ್ನಲು ಯಾವುದೇ ಅಡ್ಡಿಇಲ್ಲ. ಇದು ಶ್ರೀ ಸತೀಶ ಶೆಟ್ಟರ ಗಾಯನವನ್ನು ಮಾತ್ರ ಅನುಲಕ್ಷಿಸಿ ಹೇಳುವ ಮಾತು. ಅವರ ಸಾಮಾಜಿಕ ಕಳಕಳಿಯ ಕೆಲಸ ಕಾರ್ಯಗಳಿಂದಾಗಿ ಅವರಲ್ಲೀಗಾಗಲೇ ಇದ್ದ ಪ್ರಭೆಗೆ ಮತ್ತಷ್ಟೂ ಮೆರುಗು ಕೊಟ್ಟಿದೆ.

ಶ್ರೀ ಪಟ್ಲ ಸತೀಶ ಶೆಟ್ಟರ ಶಾರೀರವನ್ನು ಈ ರೀತಿಯಾಗಿ ವಿಶ್ಲೇಷಣೆಗೆ ಒಳಪಡಿಸಬಹುದು. ತ್ರಿಸ್ಥಾಯಿಯಲ್ಲಿ ಸುಗಮವಾಗಿ ಸಂಚರಿಸಬಲ್ಲಂತಹಾ, ಅದಾಗ್ಯೂ, ಮಂದ್ರ ಮತ್ತು ಮಧ್ಯಮ ಶ್ರುತಿ ಸ್ಥಾಯಿಯಲ್ಲಿ ಬಲಿಷ್ಟವಾದ ಸ್ವರ ಸಂಚಾರವುಳ್ಳ ಸ್ವರ- ಪ್ರಭೆ ( voice beam )ಯುಳ್ಳ ; ತಾರ ಸ್ಥಾಯಿಯಲ್ಲಿ ಮೊನಚಾಗಿ ಸಾಗುವ ಸ್ವರ ಪ್ರಕೃತಿ ಪಟ್ಲರದ್ದು.

ಸತೀಶ ಶೆಟ್ಟರ ಧ್ವನಿ ಸ್ವರ ವಿಂಗಡನೆಯ ( voice classification) ರೀತ್ಯಾ ಗಂಡು ಸ್ವರಗಳಲ್ಲಿನ ಟೆನರ್ ( tenor) ಧ್ವನಿ. ಅಂದರೆ ಈ ಧ್ವನಿಯ ಸಹಜ ಹರಿವಿನ ಪರಿಧಿ ಕಪ್ಪು ಎರಡು ಮತ್ತು ಬಿಳಿ ಮೂರರ ಸ್ಥಾಯಿಯದ್ದು. ಆದರೆ ಮುಂದೆ ಬಿಳಿ ನಾಲ್ಕು ಮತ್ತು ಕಪ್ಪು ಮೂರರವರೆಗೂ ಸಾಗಬಲ್ಲದ್ದು. ಸತತ ಅಭ್ಯಾಸ ಮತ್ತು ಹಾಡಿಕೆಯಿಂದ ಧ್ವನಿ ಶಕ್ತಿ ( tessitura)ಯನ್ನು ಬಿಳಿ ನಾಲ್ಕು ಕಪ್ಪು ಮೂರರ ಪರಿಧಿಗೆ ತಂದಿರಿಸಿದ್ದಾರೆ ಪಟ್ಲರು. ಇಲ್ಲಿ ಸಹೃದಯಿ ಪಟ್ಲರು ಅತ್ಯಂತ ಜತನದಿಂದ ತಮ್ಮ ಸ್ವರವನ್ನು ನಿಭಾಯಿಸಬೇಕೆಂಬುದು ನನ್ನ ಕಳಕಳಿ. ಕೆಲವೊಮ್ಮೆ countertenor ಅಥವಾ ಅತಿತಾರದ ಕಡೆಗೆ ಮನವು ತುಡಿದರೂ ದೂರದೃಷ್ಟಿಯಿಂದ ಅವಲೋಕಿಸಿ ಮನಸ್ಸನ್ನು ನಿಗ್ರಹಿಸಿ ಶಾರೀರವನ್ನು ತೊಡಗಿಸಿಕೊಳ್ಳುತ್ತಾರೆಂಬುದು ನನ್ನ ವೈಯ್ಯಕ್ತಿಕ ಅಪೇಕ್ಷೆ. ಪಟ್ಲರ ಧ್ವನಿಯ ಭಾವ ಸಮೃದ್ಧಿ ಮಡುಗಟ್ಟಿರುವುದು ತೊಡಗಿಸಿಕೊಂಡ ಆಧಾರ ಶ್ರುತಿಯ ಮಧ್ಯಮ ಸ್ಥಾಯಿಯಲ್ಲಿ ಮತ್ತು ಮಂದ್ರ- ಅತಿ ಮಂದ್ರದಲ್ಲಿ. ಇಡಿಯಾಗಿ ಆವರಿಸಿಬಿಡುವ ಭಾವಪೂರ್ಣ ಗುರುತ್ವ ಶಕ್ತಿ ಅವರ ಧ್ವನಿತರಂಗಗಳಲ್ಲಿದೆ.

ತೊಂಭತ್ತರ ದಶಕದಲ್ಲಿ ಗಾಯನಕ್ಕೆ ತೊಡಗಿದ ಪಟ್ಲರ ಧ್ವನಿ ವ್ಯಾಪ್ತಿಯಲ್ಲಿ ಸ್ವರ ವ್ಯೂಹಗಳು ಮಟ್ಟಸವಾಗಿ(flat) ಸಮತಲದಂತೆ ಸಾಗುತ್ತಿದ್ದವು. ಮುಂದೆ ಧ್ವನಿಯಲ್ಲಿನ ಮಾಗುವಿಕೆಗೆ ಕಾರಣವಾಗಿ ಕರ್ಣಾಟಕೀ ಶಾಸ್ತ್ರೀಯ ಸಂಗೀತ ಮತ್ತು ಹಿಂದುಸ್ಥಾನಿ ಸಂಗೀತದ ಕಲಿಕೆ ಕೂಡ ಕಾರಣವಾಗಿ ಬಂದಿದೆ ಎನ್ನಬಹುದು. ಹಾಗಾಗಿ ಅವರ ಧ್ವನಿ ವ್ಯಾಪ್ತಿ (voice range)ಯಲ್ಲಿ ಮತ್ತಷ್ಟೂ ಗುರುತ್ವವೂ, ಕಸುವೂ ಮತ್ತು ಕಂಪನವೂ ದೊರಕಿ ಭಾವ ಪ್ರಚೋದಕವಾಗಿ ಬೆಳೆದು ನಿಂತಿತು. ೨೦೦೦ ಇಸವಿಯಿಂದ ೨೦೦೯ ರ ವರೆಗಿನ ಇವರ ಗಾಯನ ಕ್ರಮದಲ್ಲಿ ಇದನ್ನು ಗಮನಿಸಬಹುದು. ಭಾವಪೂರ್ಣವಾದ ಬೇಸ್ ಸ್ವರಕ್ಕೆ ಸಂವಾದಿಯಾಗಿ ಮದ್ದಳೆ ಹೇಗಪ್ಪಾ ನುಡಿಸುವುದು ಎಂಬುದನ್ನು ಇವರಲ್ಲಿ ತೋಡಿಕೊಂಡಿದ್ದೆ. ಅಂತಹಾದ್ದೇ ಬಲಿಷ್ಟ ಮಂದ್ರ ಸ್ವರ ಸಂಚಾರವನ್ನು ಹಿರಿಯ ಭಾಗವತರುಗಳಾದ ಶ್ರೀ ದಿನೇಶ ಅಮ್ಮಣ್ಣಾಯರೂ ಮತ್ತು ಶ್ರೀ ರಾಘವೇಂದ್ರ ಮಯ್ಯ ಇವರುಗಳಲ್ಲಿಯೂ ಕಾಣಬಹುದು. ಹಿಂದೆ ದಿ.ಅಗರಿ ಶ್ರೀನಿವಾಸ ಭಾಗವತರು ತಮ್ಮ ಬಲಿಷ್ಟ ಬೇಸ್ ( ಮಂದ್ರ ಸ್ಥಾಯಿಯ) ಸ್ವರವನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದರೆಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಸಂಗೀತಾಭ್ಯಾಸದಲ್ಲಿ ಗಂಭೀರವಾಗಿ ತೊಡಗಿಸಿಕೊಂಡ ಪಟ್ಲರಿಗೆ ಸರಳಿವರಸೆ ಜಂಟಿವರಸೆ ಮೊದಲಾದ ಸಂಗೀತ ಸ್ವರಾಭ್ಯಾಸಗಳು ಗಾಯಕನ ಸ್ವರಕ್ಕೆ ಬೇಕಾದ ಸಂಸ್ಕಾರವನ್ನು ಒದಗಿಸಿತು. ಹಿಂದುಸ್ಥಾನಿ ಮತ್ತು ಕರ್ಣಾಟಕೀ ಸಂಗೀತದ ‘ಸಂಗತಿ’ ‘ ಆಲಾಪನೆ’ ‘ ಗಮಕ’ ಗಳನ್ನು ಯಕ್ಷಗಾನ ಭಾಗವತಿಕೆಗೆ ಬೇಕಾದ ಕಡೆ ಅವಶ್ಯವಿದ್ದಲ್ಲಿ ಬಳಸತೊಡಗಿದರು. ಯಕ್ಷಗಾನ ಭಾಗವತಿಕೆಗೆ ಸಂಗೀತದ ಗಮಕ- ಆಲಾಪನೆಗಳು ಪಟ್ಲರ ಭಾಗವತಿಕೆಗೆ ಜನಪ್ರಿಯತೆಯನ್ನು ತಂದುಕೊಟ್ಟಿತು. ಮಾತ್ರವಲ್ಲ ಬಹುಸಂಖ್ಯೆಯಲ್ಲಿ ಯುವಜನರ ಚಿತ್ತಾಕರ್ಷಣೆಯನ್ನು ಮಾಡಿತು. ಅದಲ್ಲದೇ ಈ ಭಾಗವತಿಕೆಯ ಹೊಸ ವ್ಯಾಪ್ತಿ ಅಲ್ಲಲ್ಲಿ ಅಪಸ್ವರವನ್ನೂ ತಂದುಕೊಟ್ಟಿತು. ಆದರೆ, ಶ್ರೀ ಸತೀಶ ಶೆಟ್ಟರ ಭಾಗವತಿಕೆಯ ನಡುವಿನ ಲಯ ಬದ್ಧವಾದ ಗಮಕಗಳು ರಂಗಕ್ಕೆ ಹೊಸ ಮೆರುಗನ್ನು ತಂದದ್ದು ಸುಳ್ಳಲ್ಲವಷ್ಟೆ? ಇಡೀ ಪ್ರೇಕ್ಷಕರನ್ನು ಸನ್ಮೋಹಗೊಳಿಸಿದ್ದು ಸುಳ್ಳಲ್ಲವಷ್ಟೆ?. ಇದು 2010ರ ನಂತರದ ಪಟ್ಲರ ಭಾಗವತಿಕೆಯ ಏರು ನಕ್ಷೆ ( upward graph).

ಪಟ್ಲರ ಗಾನದಲ್ಲಿನ ಗಮಕ ( ಅಲಗು, ಆಲಾಪನೆ)ಕ್ಕೆ ತಾಳಕ್ಕೆ ಕಚ್ಚಿ ಆಲಾಪನೆ ಸಾಗುವ ಶಿಸ್ತು ಇದೆ. ಸತತ ಅಭ್ಯಾಸದಿಂದ ಇದು ಸಿದ್ದಿಸಿದ್ದು. ತಾಳದ ಅಂಗ ಅಂಗಗಳಲ್ಲಿ ವಿರಾಮ ಪಡೆದು ನೆಗೆನೆಗೆದು ಮುಂದುವರಿಯುವ ತುಂಟತನವನ್ನೂ ಹೊಂದಿದೆ. ಗ್ರಹಬೇಧ ಮಾಡಿ ಆಲಾಪ ಮಾಡುವುದೂ ಇವರ ಕ್ರಮ. ತಾಳದ ‘ಸಮ್’ ನಿಂದ ಅರ್ಧ ಮಾತ್ರಾವರ್ತವೋ ಒಂದು ಮಾತ್ರಾವರ್ತವೋ ಬಿಟ್ಟು ತೊಡಗುವ ಕ್ರಮವೂ ವಾದಕರಿಗೆ ತಾಳಾನುಸಂಧಾನತೆಯಲ್ಲಿ ಜಾಗರೂಕರಾಗಿರಬೇಕೆಂಬುದನ್ನ ಅಪೇಕ್ಷಿಸುವಂತಹಾ ಪ್ರಸ್ತುತಿ ಪಟ್ಲರದ್ದು.

ಯಕ್ಷಗಾನ ಛಂದಸ್ಸಿನ ಜ್ಞಾನವನ್ನು ಶ್ರೀ ಶಿಮಂತೂರು ನಾರಾಯಣ ಶೆಟ್ಟರಿಂದ ಪಡೆದಿರುವ ಇವರಿಗೆ ಪದದ ಸಾಹಿತ್ಯದ ಶಿಲ್ಪದ ರೂಪು-ರೇಷೆಯ ಪರಿಚಯ ಚೆನ್ನಾಗಿದೆ. ಇದೇ ಕಾರಣಕ್ಕಾಗಿ ಛಂದಸ್ಸಿಗೆ ಅನುಗುಣವಾದ ಗಮಕಗಳು ಇವರ ಗಾನವನ್ನು ಅಲಂಕರಿಸುತ್ತದೆ. ಛಂದಸ್ಸಿನ ಅನುಸಂಧಾನ ಇದ್ದ ಕಾರಣ ನಿಧಾನ ಲಯದಲ್ಲಿ ಯಾವುದೇ ಗೊಂದಲವಿಲ್ಲದೆ ಗಾನ ಸಾಗುತ್ತದೆ.

ತಿತ್ತಿತ್ತೈ ತಾಳದ ಪದಗಳಲ್ಲಿ ಪಟ್ಲರು ತೋರುವ ಸ್ವೋಪಜ್ಞತೆ ಅನನ್ಯವಾದುದು (ಗ್ರಹ ಬೇಧ ಮಾಡಿ ಹಾಡುವುದು: ಸಮ ಗ್ರಹ, ಅತೀತ ಗ್ರಹ ಮತ್ತು ಅನಾಗತ ಗ್ರಹ).ತಾಳದ ಮೊದಲ ಪೆಟ್ಟಿನಿಂದ ಪದ ತೊಡಗುವುದು -ಸಮಗ್ರಹ ಪದ್ಯ, ತಾಳ ಮೊದಲಾಗಿ ಮತ್ತೆ ಪದ ಹಾಗೆಯೇ ಪದ ಮೊದಲಾಗಿ ಮತ್ತೆ ತಾಳ ಹೀಗೆಲ್ಲಾ ಗ್ರಹ ಬೇಧ ಮಾಡಿ ಹಾಡುವ ರಂಜನೀಯವಾದ ತಾಳದಲ್ಲಿನ ಆಟವನ್ನು ಪಟ್ಲ ಸತೀಶ ಶೆಟ್ಟರು ತೋರುತ್ತಾರೆ.
ಮಾತ್ರವಲ್ಲ ತಿತ್ತಿತ್ತೈ ತಾಳದ ಪದ್ಯವನ್ನು ಅದರಲ್ಲಿರುವ ಮೂರು ಘಾತಗಳಾದ ‘ತಿ’ ‘ತ್ತಿ’ ‘ ತ್ತೈ’ ಮೂರರಿಂದಲೂ ಪ್ರತ್ಯೇಕವಾಗಿ ಆರಂಭವಾಗುವ ಗಾನ ಚಮತ್ಕಾರವನ್ನು ತೋರುತ್ತಾರೆ. ಇದು ಶ್ರೀ ಬಲಿಪ ನಾರಾಯಣ ಭಾಗವತರ ಗರಡಿಯಲ್ಲಿ ಪಳಗಿದುದರ ಪರಿಣಾಮ ಎನ್ನಬಹುದು. ಗ್ರಹಬೇಧ ಮಾಡಿ ಹಾಡಲು ತೊಡಗುವ ಮುನ್ನ ತಾಳದಲ್ಲಿ ಬಲವಾಗಿ ಹಾಕುವ ಘಾತ ಬಲಿಪರಲ್ಲೂ ಮತ್ತು ಪಟ್ಲ ಸತೀಶ ಶೆಟ್ಟರಲ್ಲೂ ಒಂದೇ ರೀತಿಯಾಗಿದೆ. ಇಂತಹಾ ಚಮತ್ಕೃತಿಯನ್ನು ಶ್ರೀ ಪುತ್ತಿಗೆ ರಘುರಾಮ ಹೊಳ್ಳರಲ್ಲೂ, ಶ್ರೀ ಪುರುಷೋತ್ತಮ ಪೂಂಜರಲ್ಲೂ ಕಾಣಬಹುದು. ತಿತ್ತಿತ್ತೈ ಪದಗಳಿಗೆ ಬಾಯಿತಾಳ ಹಾಕಿ ಕುಣಿಸುವುದು ಸಾಮಾನ್ಯ. “ ತೊಂತನ ದಿಂದತ್ತೈ” “ ಧೀಂತನ ದಿಂದತ್ತೈ” “ತೊಂತನ ತೊಂತನ ತೋಂತನ ದಿಂದತ್ತೈ” ಈ ಬಾಯಿತಾಳ ತಾಳದ ಎರಡನೆಯ ಪೆಟ್ಟಿನಿಂದ ಆರಂಭವಾಗುವುದಾದರೆ, ಶ್ರೀ ಪಟ್ಲ ಸತೀಶ ಶೆಟ್ಟರು ತಾಳದ ಆರಂಭದಿಂದ ಶುರುವಾಗುವ ಬಾಯಿತಾಳವನ್ನೇ ಪ್ರಧಾನವಾಗಿ ಬಳಸಿ ಕುಣಿಸುತ್ತಾರೆ. ಅದೆಂದರೆ- “ ತಕದಿಮಿತಕಿಟ ತಕದಿಮಿತಕಿಟ ತಕದಿಮಿತಕಿಟ ತಕದಿಮಿತಕಿಟ ತಕದಿಮಿತಕಿಟ ತಕದಿಮಿತಕಿಟ ತಕದಿಮಿತಕಿಟದಿಂದತ್ತೈ”. ಇಲ್ಲಿ ನಮಗೆ ಮುಖ್ಯವಾಗುವುದು ತಿತ್ತಿತ್ತೈ ತಾಳದ ಮೂಲ ರೂಪವಾದ “ ತಕದಿಮಿತಕಿಟ” ಅಂದರೆ ತಿಶ್ರ ತ್ರಿಪುಟದ ( ತಕಿಟ ತಕದಿಮಿ) ವಿಲೋಮ ಗತಿಯನ್ನು ಅನುಸರಿಸಿ ಬಾಯಿತಾಳ ಹಾಕುವುದು. ತಿತ್ತಿತ್ತೈ ತಾಳದ ಮೂಲ ಸ್ವರೂಪವೇ ತಕದಿಮಿತಕಿಟವಾದವಕಾರಣ ಅದನ್ನೇ ನೆಚ್ಚಿ ಬಾಯಿತಾಳ ಹಾಕುವುದು. ಛಾಂದಸರಾದ ಶ್ರೀ ಗಣೇಶ ಕೊಲೆಕಾಡಿಯವರು ತಾವು ಕಲಿಸುವ ಪಾಠದಲ್ಲೂ ತಿತ್ತಿತ್ತೈ ತಾಳದ ಬಾಯಿತಾಳ- ಅಂದರೆ ಪದದ ನಡುವೆ ಭಾಗವತ ಬಾಯಿತಾಳ ಹಾಕುತ್ತಾನಲ್ಲಾ ಅದು-
“ದಿಂದಿಂತಕಿಟ” ಮತ್ತು “ತಕದಿಮಿತಕಿಟ” ಎಂದೇ ಇದೆ.

ವಿಳಂಬ ಲಯದಲ್ಲಿ ಪಟ್ಲರು ಹಾಡುವ ಗಾಯನವೂ ಸೊಗಸೇ. ಅಲ್ಲಿ ತಾಳ ಹಾಕುವ ಕ್ರಮವೂ ಅಂದವೇ. ಜಾಗಟೆಗೆ ಬೀಳುವ ಘಾತ ಭಾರವಾಗಿ ಲಯದ ಅವಧಿಯಲ್ಲಿ ಸುಸ್ಪಷ್ಟವಾಗಿ ವಾದಕರಿಗೆ ಮನೋಧರ್ಮ ಹಚ್ಚುವಂತಹಾ ಅನುಸರಣೀಯಾದ ತಾಳ ಹಾಕುವ ಕ್ರಮ. ತಾಳದ ಎಲ್ಲಾ ಘಾತಗಳನ್ನು ಹಾಕುತ್ತಾರೆ. ಇದು ಬಹಳ ಮುಖ್ಯ. ಕುಣಿಯುವಾಗ ತಾಳದ ಎಲ್ಲಾ ಘಾತಗಳನ್ನು ಹಾಕದಿದ್ದರೆ ಮದ್ದಲೆ-ಚೆಂಡೆ ವಾದಕರಿಗೆ ತುಂಬಾ ತೊಡಕಾಗುತ್ತದೆ. ಹಾಕಿದರೆ ಮನೋಧರ್ಮ ಹುಚ್ಚೆದ್ದು ಕುಣಿದುಬಿಡುತ್ತದೆ.

ಸತೀಶ ಶೆಟ್ಟರಿಗೆ ಚೆಂಡೆ- ಮದ್ದಳೆ ನುಡಿಸಾಣಿಕೆಯ ಪ್ರಾಥಮಿಕ ಜ್ಞಾನವೂ ಇದ್ದಕಾರಣ ಭಾಗವತಿಕೆಯಲ್ಲಿ ಇವರು ತೋರುವ ಲಯವಿನ್ಯಾಸದಲ್ಲಿ ಗಟ್ಟಿತನ ಇದೆ.

ಕಟೀಲು ಮೇಳದಲ್ಲಿ ಬಲಿಪ ನಾರಾಯಣ ಭಾಗವತರ ಜತೆಗೆ ಅಕ್ಷರಶಃ ಶಿಷ್ಯವೃತ್ತಿಯನ್ನು ಮಾಡಿ ಪ್ರಸಂಗ- ಪದ್ಯಗಳ ಒಳಗನ್ನು ತನ್ನೊಳಗುಮಾಡಿ ಮದ್ದಲೆಗಾರರಾದ ಶ್ರೀ ಪೆರುವಾಯಿ ನಾರಾಯಣ ಭಟ್ಟರ ಸಲಹೆ ಸೂಚನೆಗಳನ್ನು ಪಡೆಯುತ್ತಾ ಬೆಳೆದ ಶ್ರಿ ಸತೀಶ ಶೆಟ್ಟರು ಇಂದು “ ಪಟ್ಲ ಭಾಗವತ”ರಾಗಿದ್ದಾರೆ. ಗುರುಗಳಾದ ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಲ್ಲಿ ಹಿಮ್ಮೇಳ ಕಲಿತು, ಶ್ರೀ ಬಳ್ಳಂಪದವು ಯೋಗೀಶ ಶರ್ಮರ ಬಳಿ ಶಾಸ್ತ್ರೀಯ ಸಂಗೀತ; ಶ್ರೀ ರೋಶನ್ ಮಾರ್ಟಿಸ್ ಅವರ ಬಳಿ ಹಿಂದುಸ್ಥಾನಿ ಸಂಗೀತದ ಅಭ್ಯಾಸ ಮಾಡಿರುವ ಪಟ್ಲರು ಸಂಗೀತದ ಸತತ ಅಭ್ಯಾಸಿ. ರಾಗಗಳ ಕುರಿತು ಅತೀವ ಆಸಕ್ತಿ. ಯಕ್ಷಗಾನಕ್ಕೆ ಒಗ್ಗುವ ರಾಗವನ್ನು ಅದರ ಸ್ವರ ಸಹಿತ ಹಾರ್ಮೋನಿಯಂ ಜತೆ ಅಭ್ಯಾಸ ಮಾಡಿಯೇ ರಂಗಕ್ಕೆ ತರುವುದಲ್ಲದೆ ಕೇವಲ ಅನುಕರಣೆ ಮಾಡಿ ಅಲ್ಲ. ಇದು ಪಟ್ಲರ ಅನನ್ಯತೆ. ನಾವು ಅವರ ಜನಪ್ರಿಯ ಆಲಾಪನೆಗಳನ್ನು ನೋಡುವಾಗ ಅದರ ಹಿಂದಿನ ಅವರ ಅಭ್ಯಾಸ ಕ್ರಮ ಪಟ್ಟ ಸಾಧನೆ ಇವನ್ನೆಲ್ಲವನ್ನೂ ಗಮನಿಸಬೇಕು. ಪಟ್ಲರನ್ನು ಅನುಕರಣೆ ಮಾಡುವವರು ಅಥವಾ ಅವರಂತೆ ಹಾಡ ಬಯಸುವವರು ಇವನ್ನೆಲ್ಲಾ ನೋಡಬೇಕು.

ಪಟ್ಲ ಎಂಬ ವಿದ್ಯಮಾನಕ್ಕೆ ಕಲಾದೇವತೆಯ ಅನುಗ್ರಹ ಸದಾ ಇರಲಿ.

ಕೃಷ್ಣಪ್ರಕಾಶ ಉಳಿತ್ತಾಯ
ಈಶಾವಾಸ್ಯ, ಸದಾಶಿವ ದೇವಸ್ಥಾನದ ಬಳಿ, ಪೆರ್ಮಂಕಿ
ಉಳಾಯಿಬೆಟ್ಟು ಗ್ರಾಮ, ಮಂಗಳೂರು

(ಪ್ರಜಾವಾಣಿ ಪತ್ರಿಕೆ)

error: Content is protected !!
Share This