ಪ್ರೇಕ್ಷಕರ ಮನೆ ಮುಂದೆ ಪೌರಾಣಿಕ ಲೋಕವನ್ನು ತೆರೆದಿಡುವಲ್ಲಿ ಯಕ್ಷಗಾನ ಪ್ರಧಾನ ಪಾತ್ರ ವಹಿಸಿದೆ. ಓದಿ ಅರ್ಥೈಸುವುದಕ್ಕಿಂತಲೂ ನೋಡಿ ಅರ್ಥೈಸುವುದು ಬಹಳ ಸುಲಭ. ಆದ್ದರಿಂದಲೇ ಗ್ರಾಮೀಣ ಜನತೆ ಯಕ್ಷಗಾನದತ್ತ ಹೆಚ್ಚು ಆಕರ್ಷಿತರಾಗಿರುವುದು ಹಾಗೂ ಪುರಾಣದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರುವುದು ಎಂದು ಉದಯ ನಾವಡ ಹೇಳಿದರು. ಅವರು ಈ ತಿಂಗಳ 14ರಂದು ಪರಕ್ಕಿಲ ದೇವಸ್ಥಾನದಲ್ಲಿ ಜರಗುವ ಮಧೂರು ಯಕ್ಷಸಂಭ್ರಮ ಕಾರ್ಯಕ್ರಮದ ಕುರಿತಾಗಿ ಚರ್ಚಿಸಲು ಸೇರಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯದರ್ಶಿ ಗಣೇಶ ತುಂಗ ಸ್ವಾಗತಿಸಿ, ಖಜಾಂಚಿ ಸುನಿಲ್ ಮಧೂರು ವಂದಿಸಿದರು. ಕೃಷ್ಣಪ್ರಸಾದ ಅಡಿಗ ನಿರೂಪಿಸಿದರು. ರಾಮಕೃಷ್ಣ ಶೆಟ್ಟಿ, ಸಂದೀಪ್, ಮಹೇಶ್ ಮಧುರು, ಶರತ್, ಮುರಳೀ ನಾವಡ, ವಿಠಲ ಗಟ್ಟಿ, ಪ್ರವೀಣ ರೈ ಬೇಳ ಉಪಸ್ಥಿತರಿದ್ದರು. ಯಕ್ಷಮಿತ್ರರು ಮಧೂರು ಇವರ 12ನೇ ಕಲಾಕಾಣಿಕೆಯಾಗಿ ಈ ತಿಂಗಳ 14ರಂದು ಮಧ್ಯಾಹ್ನ 3ರಿಂದ ಯಕ್ಷಸಂಭ್ರಮ ಜರಗಲಿದೆ. ಪ್ರಸಿದ್ಧ ಹಿಮ್ಮೇಳವಾದಕ, ಕೂಡ್ಲು ಸದಾನಂದ ರಾವ್ರಿಗೆ ಗೌರವಾರ್ಪಣೆ ನಡೆಯಲಿದೆ. ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಶುಭಾಶೀರ್ವಚನ ನೀಡುವರು. ಹಿರಿಯ ಧಾರ್ಮಿಕ ಮುಂದಾಳು ವಾಸುದೇವ ಹೊಳ್ಳ ಮಧೂರು ಅಧ್ಯಕ್ಷತೆ ವಹಿಸುವರು. ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ತುಳಸೀ ಜಲಂಧರ’ ಹಾಗೂ ‘ತಾಮ್ರಧ್ವಜ ಕಾಳಗ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಹಲವರು ಸಹಕರಿಸುವರು.