Obituary
ಕೆ. ದಾಮೋದರ ಐತಾಳ ನಿಧನ

ಉಡುಪಿ ಬಳಕೆದಾರರ ವೇದಿಕೆಯ ವಿಶ್ವಸ್ಥರಾಗಿದ್ದ ನಿವೃತ್ತ ಶಿಕ್ಷಕ, ಶಿಕ್ಷಣಾಧಿಕಾರಿ, ಪತ್ರಕರ್ತ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿದ್ದ ಕೆ. ದಾಮೋದರ ಐತಾಳ (86 ವರ್ಷ) ಇಂದು 08-12-2020ರಂದು ಮುಂಜಾನೆ 2 ಗಂಟೆಗೆ ಕಡಿಯಾಳಿಯ ಸ್ವಗೃಹದಲ್ಲಿ ನಿಧನರಾದರು. ಇವರಿಗೆ 5 ವರ್ಷಗಳ ಹಿಂದೆ ಯಕ್ಷಗಾನ ಕಲಾರಂಗದ ಕೋಶಾಧಿಕಾರಿಯಾಗಿದ್ದ ಎಸ್. ಗೋಪಾಲಕೃಷ್ಣ ಇವರ ನೆನಪಿನಲ್ಲಿ ಸಾಮಾಜಿಕ ಕಾರ್ಯಕರ್ತರಿಗೆ ನೀಡುವ ‘ಸೇವಾ ಭೂಷಣ’ ಪ್ರಸಸ್ತಿಯನ್ನು ನೀಡಿ ಗೌರವಿಸಿದ್ದನ್ನು ಸ್ಮರಿಸಿಕೊಳ್ಳಬಹುದು. ಐತಾಳರ ನಿಧನದಿಂದ ಉಡುಪಿ ಓರ್ವ ಸಜ್ಜನ ಹಿರಿಯ ಸಾಮಾಜಿಕ ಕಾರ್ಯಕರ್ತನನ್ನು ಕಳೆದು ಕೊಂಡಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಹಿರಿಯ ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯ ನಿಧನ
ಉದ್ಯಾವರ ಮಾಧವ ಆಚಾರ್ಯ ರಂಗ ನಿರ್ದೇಶಕ ಕಥೆಗಾರ, ಕವಿ, ನಟ, ಪ್ರಸಿದ್ಧ ಗುಡ್ಡೆದ ಭೂತ ಧಾರಾವಾಹಿಯ ನಟ, ಉಡುಪಿಯ ಸಮೂಹ ಸಂಸ್ಥೆಯ ಸಂಸ್ಥಾಪಕ, ನಾಟಕ, ನೃತ್ಯ ರೂಪಕ ಮೂಲಕ ರಾಜ್ಯಾದ್ಯಂತ ಜನಮನ್ನಣೆಗಳಿಸಿದ ಸಾಧಕ. ನಾಡಿನಾದ್ಯಂತ 50ಕ್ಕೂ ಹೆಚ್ಚು ನಾಟಕ, ನೃತ್ಯರೂಪಕಗಳಿಗೆ ನಿರ್ದೇಶನ ಗೈದ ಇವರು ರಾಜ್ಯರಾಜ್ಯೋತ್ಸವ, ರಂಗ ವಿಶಾರದ ಪ್ರಶಸ್ತಿಗೆ ಭಾಜನರಾಗಿದ್ದರು. ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಉಪನ್ಯಾಸಕರಾಗಿದ್ದ ಇವರು ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಇಂದು (07-12-2020) ಮಧ್ಯಾಹ್ನ ನಿಧನರಾದರು. ಇವರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಯಕ್ಷಗಾನ ಕಲಾರಂಗದ ಸದಸ್ಯರಾಗಿದ್ದ ಇವರು ಯಕ್ಷಗಾನ ವೃತ್ತಿ ಕಲಾವಿದರಿಗಾಗಿ ಆರಂಭಗೊಂಡ ‘ಪ್ರೊ. ಬಿ. ವಿ. ಆಚಾರ್ಯ ಯಕ್ಷನಿಧಿ’ಯ ಆರಂಭ ಕಾಲದಲ್ಲಿ ವಿಶೇಷವಾಗಿ ಕಾರ್ಯನಿರ್ವಹಿಸಿದ್ದರು. 2004ರಲ್ಲಿ ಇವರ ನೇತೃತ್ವದಲ್ಲಿ ಯಕ್ಷಗಾನ ಕಲಾರಂಗದ ತಂಡ ಅಮೇರಿಕಾದಲ್ಲಿ ಜರುಗಿದ ‘ಅಕ್ಕ ಸಮ್ಮೇಳನ’ದಲ್ಲಿ ಭಾಗವಹಿಸಿ ಅಮೇರಿಕದಾದ್ಯಂತ 11 ಕಡೆಗಳಲ್ಲಿ ಪ್ರದರ್ಶನ ನೀಡಿತ್ತು. ಆಚಾರ್ಯರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.
ಹಿರಿಯ ಯಕ್ಷಗಾನ ಕಲಾವಿದ ಮೇರುನಟ ಹಡಿನಬಾಳ ಶ್ರೀಪಾದ ಹೆಗಡೆ ನಿಧನ

ಅಭಿಜಾತ ಕಲಾವಿದ ಹಡಿನಬಾಳ ಶ್ರೀಪಾದ ಹೆಗಡೆ (67) ನಿನ್ನೆ ರಾತ್ರಿ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಒಂದುವರೆ ವರ್ಷದ ಹಿಂದೆ ರಸ್ತೆ ಅಪಘಾತದಲ್ಲಿ ತಲೆಗೆ ಪೆಟ್ಟಾಗಿ ನಿಧಾನ ಚೇತರಿಸಿಕೊಳ್ಳುತ್ತಿದ್ದರು. ಅವರು ತಾಯಿ, ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಗುಂಡುಬಾಳ ಮೇಳದಲ್ಲಿ ಸೋದರಮಾವ ಹಡಿನಬಾಳ ಸತ್ಯ ಹೆಗಡೆ ಆಶ್ರಯದಲ್ಲಿ ಯಕ್ಷಗಾನ ಕಲಿತು ಮುಂದೆ ಅಮೃತೇಶ್ವರೀ, ಹಿರೇಮಹಾಲಿಂಗೇಶ್ವರ, ಪೆರ್ಡೂರು, ಬಚ್ಚಗಾರು, ಸಾಲಿಗ್ರಾಮ, ಮಂದಾರ್ತಿ ಮತ್ತು ಕೆರೆಮನೆ ಮೇಳಗಳಲ್ಲಿ ನಾಲ್ಕುವರೆ ದಶಕಗಳ ಕಲಾಸೇವೆಗೈದಿದ್ದರು. ಪಾತ್ರಕ್ಕೊಪ್ಪುವ ವೇಷಗಾರಿಕೆ, ಭಾವಪೂರ್ಣ ಅಭಿನಯ, ಅರ್ಥಪೂರ್ಣ ಮಾತುಗಾರಿಕೆಯಿಂದ ಹಲವು ಪೌರಾಣಿಕ ಪಾತ್ರಗಳನ್ನು ಅನನ್ಯವಾಗಿ ಕಟ್ಟಿಕೊಟ್ಟಿದ್ದರು.
ಯಕ್ಷಗಾನ ಕಲಾರಂಗಕ್ಕೆ ಅವರ ಸಂಕಷ್ಟದ ಸಂದರ್ಭದಲ್ಲಿ ಸಹಾಯ ಮಾಡಿದ ಸಂತೃಪ್ತಿಯಿದೆ. ಪದ್ಮಶ್ರೀ ಚಿಟ್ಟಾಣೆ ರಾಮಚಂದ್ರ ಹೆಗಡೆ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಕ್ಕೆ ಭಾಜನರಾದ ಅವರಿಗೆ ಸಂಸ್ಥೆ “ಯಕ್ಷಗಾನ ಕಲಾರಂಗ ಪ್ರಶಸ್ತಿ” ನೀಡಿ ಗೌರವಿಸಿದೆ. ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.
ತೆಂಕಬೈಲು ತಿರುಮಲೇಶ ಶಾಸ್ತ್ರಿ

ತೆಂಕುತಿಟ್ಟಿನ ಹಿರಿಯ ಭಾಗವತರಾದ ತೆಂಕಬೈಲು ತಿರುಮಲೇಶ ಶಾಸ್ತ್ರಿ(77ವರ್ಷ) ಇಂದು ನಿಧನರಾದರು. ಸುಮಾರು ಐದು ದಶಕಗಳ ಕಾಲ ವೃತ್ತಿ ಹಾಗೂ ಹವ್ಯಾಸಿ ಯಕ್ಷಗಾನ ರಂಗದಲ್ಲಿ ಭಾಗವತರಾಗಿ ತಮ್ಮದೇ ವಿಶಿಷ್ಟ ಶೈಲಿಯಮೂಲಕ ಪ್ರಸಿದ್ಧರಾಗಿದ್ದರು.
ಪತ್ನಿ, ಈರ್ವರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ. ಇವರ ಪುತ್ರ ಮುರಲಿ ಕೃಷ್ಣ ಶಾಸ್ತ್ರೀ ಪ್ರಸಿದ್ಧ ಭಾಗವತರಾಗಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿದ್ದು ಯಕ್ಷಗಾನ ಕಲಾರಂಗ 2011ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿತ್ತು.
ಯಕ್ಷಗಾನ ಮದ್ದಲೆ ವಾದಕ ನಲ್ಲೂರು ಜನಾರ್ದನ ಆಚಾರ್ಯ ನಿಧನ

ಹಿರಿಯ ಯಕ್ಷಗಾನ ಮದ್ದಲೆವಾದಕ ನಲ್ಲೂರು ಜನಾರ್ದನ ಆಚಾರ್ಯ (75ವರ್ಷ) ಸೆಪ್ಟಂಬರ್ 20, 2020ರಂದು ಶೃಂಗೇರಿ ಸಮೀಪದ ನಲ್ಲೂರಿನ ಸ್ವಗ್ರಹದಲ್ಲಿ ನಿಧನಹೊಂದಿದರು. ಪ್ರಸಿದ್ಧ ಭಾಗವತರಾಗಿದ್ದ ಮರಿಯಪ್ಪ ಆಚಾರ್ ಇವರ ಸಹೋದರ. ಐದು ದಶಕಗಳಿಗೂ ಮೀರಿದ ಸುದೀರ್ಘ ವೃತ್ತಿ ಬದುಕಿನಲ್ಲಿ ಶಿವರಾಜಪುರ, ಶೃಂಗೇರಿ, ಕಿಗ್ಗ, ಹಾಲಾಡಿ, ಬಗ್ವಾಡಿ, ಗೋಳಿಗರಡಿ, ಮುಲ್ಕಿ, ಮಡಾಮಕ್ಕಿ, ಮೇಗರವಳ್ಳಿ, ಮಂದಾರ್ತಿ, ಗುತ್ಯಮ್ಮ, ಪೆರ್ಡೂರು, ಕಮಲಶಿಲೆ, ಮಾರಣಕಟ್ಟೆ ಮೇಳಗಳಲ್ಲಿ ಕಲಾಸೇವೆ ಗೈದಿದ್ದಾರೆ. ಸಂಪ್ರದಾಯಬದ್ಧ ಪೆಟ್ಟುಗಳಿಂದ ಕರ್ಣಾನಂದಕರ ನಾದ ಹೊಮ್ಮಿಸುವಲ್ಲಿ ನಿಷ್ಣಾತರಾಗಿದ್ದರು. ಭಾಗವತರ ಹಾಡುಗಾರಿಕೆಗೆ ಪೂರಕವಾಗಿ ವೇಷಧಾರಿಗಳ ಕುಣಿತಕ್ಕೆ ಪ್ರೇರಕವಾಗಿ ಮದ್ದಳೆ ನುಡಿಸುವ ಕೌಶಲ ಕರಗತ ಮಾಡಿಕೊಂಡಿದ್ದರು. ಯಕ್ಷಗಾನ ಅಕಾಡೆಮಿ ಕೊಡಮಾಡುವ 2019-20ನೇ ಸಾಲಿನ ‘ಯಕ್ಷಸಿರಿ’ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಉಡುಪಿಯ ಯಕ್ಷಗಾನ ಕಲಾರಂಗ, ಡಾ.ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ, ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿ ಅಂಬಲಪಾಡಿಯ ಪ್ರಶಸ್ತಿಯೂ ಸೇರಿದಂತೆ ಹಲವು ಪುರಸ್ಕಕಾರಗಳಿಗೆ ಭಾಜನರು. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗ (ರಿ.) ಉಡುಪಿ ಇದರ ಅಧ್ಯಕ್ಷ ಕೆ. ಗಣೇಶ್ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.
ಅಪರೂಪದ ಯಕ್ಷಗಾನ ಅರ್ಥಧಾರಿ – ವೇಷಧಾರಿ ಜೋಕಟ್ಟೆ ಮಹಮ್ಮದ್ ನಿಧನ

ಜಿಲ್ಲೆಯ ಹಿರಿಯ ಸಾಮಾಜಿಕ ಧುರೀಣ, ಉದ್ಯಮಿ, ತೊಂಭತ್ತರ ದಶಕದ ಅಪರೂಪದ ಯಕ್ಷಗಾನ ಅರ್ಥಧಾರಿ – ವೇಷಧಾರಿ ಸರಳ – ಸಜ್ಜನ ಸ್ನೇಹ ಜೀವಿ ಜೋಕಟ್ಟೆ ಮಹಮ್ಮದ್ ಅವರು ನಿನ್ನೆ ನಿಧನರಾದ ವಾರ್ತೆ ಬಂತು.
ಶೇಣಿಯವರಂತಹ ಹಿರಿಯರ ಸಾಂಗತ್ಯದಲ್ಲಿ ಯಕ್ಷಗಾನ ಕಲಾಸಕ್ತಿಯನ್ನು ಬೆಳೆಸಿಕೊಂಡು ಹಿರಿಯ – ಕಿರಿಯ ಅರ್ಥಧಾರಿಗಳ ಕೂಟದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದ ಜನಾಬ್ ಮಹಮ್ಮದ್ ಅವರ ವಿಜಯದ ಭೀಷ್ಮನ ಪಾತ್ರ ಜಯಭೇರಿ ಗಳಿಸಿತ್ತು.
ಜೋಕಟ್ಟೆಯವರ ನಿಧನದಿಂದ ನಮ್ಮ ನಡುವಿನ ಸಾಮರಸ್ಯದ ಸಾಮಾಜಿಕ – ಸಾಂಸ್ಕೃತಿಕ ಕೊಂಡಿಯೊಂದು ಕಳಚಿದಂತಾಯ್ತು. ಅವರಿಗೆ ಸಮಸ್ತ ಯಕ್ಷಗಾನ ಅಭಿಮಾನಿಗಳ ಪರವಾಗಿ ಯಕ್ಷಾಂಗಣದ ಶ್ರದ್ಧಾಂಜಲಿ – ಕಾರ್ಯಾಧ್ಯಕ್ಷ, ಯಕ್ಷಾಂಗಣ ಮಂಗಳೂರು
ಎಚ್. ಶಿವಾನಂದ ಹಂದೆ

ಸುಮಾರು ಮೂರು ದಶಕಗಳ ಕಾಲ ರಾಜ್ಯದ ಬೇರೆ ಬೇರೆ ಗ್ರಾಮಗಳಲ್ಲಿ ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರಾಗಿ ಸೇವೆ ಸಲ್ಲಿಸಿ, ಕೋಟ ಹದಿನಾಲ್ಕುಗ್ರಾಮದ ಯಾವುದೇ ಆಸ್ತಿವ್ಯಾಜ್ಯಗಳನ್ನು ಸುಲಭದಲ್ಲಿ ಪರಿಹರಿಸಿ ತಂದೆ ರಾಮದೇವ ಹಂದೆಯವರ ಪಟೇಲಗಾರಿಕೆಯನ್ನು ಮುಂದುವರಿಸಿ ಜನಾನುರಾಗಿಯಾಗಿದ್ದ ಕೋಟದ ಪಟೇಲ ಎಚ್. ಶಿವಾನಂದ ಹಂದೆ (88) ಇಂದು ಬೆಳಿಗ್ಗೆ ಅಲ್ಪಕಾಲದ ಅಸೌಖ್ಯದಿಂದ ವಿಧಿವಶರಾದರು.
ಹಲವು ವರ್ಷಗಳ ಕಾಲ ಕೋಟ ಹಂದೆ ದೇವಸ್ಥಾನದ ಮೊಕ್ತೆಸರರಾಗಿ ದೇವಳದ ಅಭಿವೃದ್ಧಿ ಕಾರ್ಯದಲ್ಲಿ ದುಡಿದವರು. ಸಾಲಿಗ್ರಾಮ ಮಕ್ಕಳ ಮೇಳ,ಕೂಟ ಬ್ರಾಹ್ಮಣ ಸಮಾಜ, ಶಾಂಭವಿ ಶಾಲಾ ಯಕ್ಷಗಾನ ತರಬೇತಿ ಕೇಂದ್ರ ಈ ಮೊದಲಾದ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದವರು.
ಸುಮಾರು 1960 ರ ಹೊತ್ತಿನಲ್ಲಿಯೇ ತನ್ನ ಸಹೋದರೊಂದಿಗೆ ಹವ್ಯಾಸಿ ಯಕ್ಷಗಾನ ವೇಷಧಾರಿಯಾಗಿ ಗುರುತಿಸಿಕೊಂಡವರು. ಮೊತ್ತಮೊದಲಬಾರಿಗೆ ಹವ್ಯಾಸಿಗಳಿಗಾಗಿ ಮತ್ತು ಮಕ್ಕಳ ಅನುಕೂಲಕ್ಕಾಗಿ ಹಂದಟ್ಟು ಹರಿಕೃಷ್ಣ ಹಂದೆಯವರೊಂದಿಗೆ ಸೇರಿ ಭಾರವಾದ ಅಟ್ಟೆ ಮುಂಡಾಸುಗಳ ಬದಲಿಗೆ ಬಿದಿರು, ತಗಡು, ರಟ್ಟಿನ ಕೇದಗೆಮುಂದಲೆಗಳ ಆವಿಷ್ಕಾರದ ಪ್ರಯೋಗ ಮಾಡಿದವರು. ಅಜಪುರ ಯಕ್ಷಗಾನ ಸಂಘ ಬ್ರಹ್ಮಾವರ, ಕಲ್ಕೂರ ಪ್ರತಿಷ್ಠಾನ ಮಂಗಳೂರು, ಬ್ರಾಹ್ಮಣ ಸಭಾ ಸಾಲಿಗ್ರಾಮ, ಸೇರಿದಂತೆ ಅನೇಕ ಸಂಸ್ಥೆಗಳಿಂದ ಸಮ್ಮಾನಪಡೆದವರು. ಮೃತರು ಮೂವರು ಹೆಣ್ಣುಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
ಕರ್ಕಿ ನಾರಾಯಣ ಹಾಸ್ಯಗಾರ ವಿಧಿವಶ

ಪ್ರಸಿದ್ಧ ಯಕ್ಷಗಾನ ಕಲಾವಿದ ಕರ್ಕಿ ನಾರಾಯಣ ಹಾಸ್ಯಗಾರ ವಯೋಸಹಜವಾಗಿ (22-06-2020ರಂದು) ಕರ್ಕಿಯ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಕರ್ಕಿ ದುರ್ಗಾಂಬ ಯಕ್ಷಗಾನ ಮೇಳದ ಪ್ರಸಿದ್ಧ ಕಲಾವಿದರಾಗಿದ್ದ ಕರ್ಕಿ ಪರಮಯ್ಯ ಹಾಸ್ಯಗಾರರ ಸುಪುತ್ರರಾಗಿದ್ದ ಇವರು ಪೂರ್ಣ ಕಾಲಿಕ ಯಕ್ಷಗಾನ ಕಲಾವಿದರಾಗಿದ್ದರು. ಸುಮಾರು ಏಳು ದಶಕಗಳ ಕಾಲ ಕಲಾ ಸೇವೆಗೈದ ಇವರು ತೆಂಕುತಿಟ್ಟಿನ ಸುರತ್ಕಲ್ ಮೇಳದಲ್ಲಿಯೂ ತಿರುಗಾಟ ಮಾಡಿದ್ದರು. ಅವರ ಕೃಷ್ಣ, ಸುಧನ್ವ ಮೊದಲಾದ ಪಾತ್ರಗಳು ಕಲಾಪ್ರೇಮಿಗಳ ಮೆಚ್ಚುಗೆಗಳಿಸಿದ್ದವು. ತಮ್ಮ ಲಾಲಿತ್ಯಪೂರ್ಣ ನೃತ್ಯಾಭಿನಯದಿಂದ ಕರ್ಕಿ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿ, ಉಡುಪಿಯ ಯಕ್ಷಗಾನ ಕಲಾರಂಗದ ಪ್ರಶಸ್ತಿಯೂ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು. ಅವರು ಪತ್ನಿ, ಪುತ್ರ, ಪುತ್ರಿ ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.
ಹಿರಿಯ ಯಕ್ಷಗಾನ ಕಲಾವಿದ – ಶ್ರೀ ಸುರೇಶ್ ಗಾಣಿಗ

ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ಸುರೇಶ್ ಗಾಣಿಗ (ಸೂರ ಗಾಣಿಗ) ಪಡುಕೋಣೆ, (84 ವರ್ಷ) ಇವರು 23.04.2020 ರ ರಾತ್ರಿ 10.00 ಘಂಟೆಗೆ ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ. ಕಳೆದ ಎರಡು ದಿನಗಳಿಂದ ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಇವರು ಕುಂದಾಪುರ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಸೌಮ್ಯ ಸ್ವಭಾವದವರೂ, ಸಜ್ಜನರೂ ಆಗಿದ್ದ ಇವರು 50 ವರ್ಷಗಳಿಗೂ ಹೆಚ್ಚು ಕಾಲ ಬಡಗುತಿಟ್ಟಿನ ವಿವಿಧ ಮೇಳಗಳಲ್ಲಿ ಕಲಾ ಸೇವೆಯನ್ನು ಮಾಡಿ ನಿವೃತ್ತರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿರುತ್ತಾರೆ. ಸ೦ಸ್ಥೆಯು ಇವರಿಗೆ ಪ್ರೊ. ಬಿ. ವಿ. ಆಚಾರ್ಯ ಸ್ಮರಣೆಯಲ್ಲಿ”ಯಕ್ಷಗಾನ ಕಲಾರ೦ಗ ಪ್ರಶಸ್ತಿ “ನೀಡಿ ಗೌರವಿಸಿತ್ತು. ಇವರ ಕಲಾ ಸೇವೆಯನ್ನು ಸ್ಮರಿಸುತ್ತಾ ಯಕ್ಷಗಾನ ಕಲಾರ೦ಗದ ಅಧ್ಯಕ್ಷ ಕೆ. ಗಣೇಶ್ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಎಚ್.ಬಿ.ಎಲ್.ರಾವ್
1970 ರ ದಶಕದಿಂದ ಮುಂಬಯಿ ಮಹಾನಗರಿಯಲ್ಲಿ ಯಕ್ಷಗಾನಕ್ಕಾಗಿಯೂ ಆರಾಧನಾ ಸಂಸ್ಥೆಗಳಿಗಾಗಿಯೂ ಬಲುಬಗೆಯ ಸಾರ್ವಜನಿಕ ಕೆಲಸ ವಹಿಸಿಕೊಂಡ ಎಚ್.ಬಿ.ಎಲ್.ರಾವ್ ಹೃದಯಾಘಾತದಲ್ಲಿ 22-5-2020 ರಂದು ಬೆಳಿಗ್ಗೆ ನಿಧನರಾದುದು ಕನ್ನಡ ಸಾಂಸ್ಕೃತಿಕ ರಂಗಕ್ಕಾಗಿರುವ ಬಲು ದೊಡ್ಡ ನಷ್ಟ.

ಮುಂಬಯಿಯ ಕನ್ನಡಿಗರ ಸಾಂಸ್ಕೃತಿಕ ಕೇಂದ್ರಗಳಲ್ಲಿ ಮುಖ್ಯವಾದ ಗೋಕುಲದ ನವೀಕರಣದ ಅಂಗವಾಗಿ ಹೊರಬರುವ ಸ್ಮರಣಸಂಚಯದ ಬಗೆಗೆ ಕೆಲಸದಲ್ಲಿರುವಾಗಲೆ ಈ ಅಗಲಿಕೆ ಆಗಿರುವುದು ಕನ್ನಡಕ್ಕೆ ಆಗಿರುವ ಒಂದು ಆಘಾತವಾಗಿದೆ.

ದ್ವೈವಾರ್ಷಿಕ ಯಕ್ಷಗಾನ ಸಾಹಿತ್ಯ ಸಮ್ಮೇಳನ, ದ್ವಾರ್ಷಿಕ ತುಳು ಸಮ್ಮೇಳನ, ಯಕ್ಷಗಾನ ಪ್ರಸಂಗ ಸಂಪುಟಗಳ, ಗಣ್ಯ ವ್ಯಕ್ತಿಗಳ ಅಭಿನಂದನ ಗ್ರಂಥ ಸಂಪಾದನ ಇಂಥ ಕೆಲಸಗಳಲ್ಲಿ ಬಿಡುವರಿಯದೆ ದುಡಿಯುತ್ತ ಬಂದ ಎಚ್ ಬಿ ಎಲ್ ಅವರ ಅಗಲಿಕೆಯಿಂದ ಮುಂಬಯಿಯಲ್ಲಿ ಉಂಟಾಗಿರುವ ಶೂನ್ಯತೆಯನ್ನು ತುಂಬಲು ಒಬ್ಬರಲ್ಲ, ಹಲವು ಸಾಂಸ್ಕೃತಿಕ ದೈತ್ಯಶಕ್ತಿಗಳು ಮುಂಬರಬೇಕಾದೀತು. ಯಕ್ಷಗಾನದ ಸಮ್ಮೇಳನಗಳನ್ನು ಇನ್ನು ಹೊಸತನ ತರಲು ಇಲ್ಲ ಎನ್ನುವಷ್ಟು ನವೀನತೆಯಿಂದ ನಡೆಸಿದುದು ಒಂದು ಇತಿಹಾಸವೇ ಆಗಿರುತ್ತದೆ. ಅವರು ಬರಹಗಾರರಾಗಿಯೂ ಯಕ್ಷಗಾನ ಮುಖವರ್ಣಿಕೆ ದಾಖಲಾತಿ ಮೂಲಕವೂ ಅವರು ಪ್ರತಿಬಿಂಬ ಮೂಡಿಸಿದ್ದಾರೆ.
