Obituary

ಕಲಾವಿದ ಮುಂಡ್ಕೂರು ವಸಂತ ಶೆಟ್ಟಿ ನಿಧನ

ತೆಂಕು ತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಮುಂಡ್ಕೂರು ವಸಂತ ಶೆಟ್ಟಿ(83) ನಿನ್ನೆ (21.9.2024) ನಿಧನ ಹೊಂದಿದರು. ಮುಂಡ್ಕೂರು ಕೃಷ್ಣ ಶೆಟ್ಟಿಯವರಲ್ಲಿ ಹೆಜ್ಜೆಗಾರಿಕೆ ಕಲಿತು ಮುಂಡ್ಕೂರು ಮೇಳದಲ್ಲಿ ಹವ್ಯಾಸಿ ವೇಷಧಾರಿಯಾಗಿ, ಮುಂದೆ ಉದ್ಯೋಗ ನಿಮಿತ್ತ ಮುಂಬಯಿ ಸೇರಿ ಯಕ್ಷಗಾನಾಸಕ್ತಿಯಿಂದ ಮತ್ತೆ ಊರಿಗೆ ಬಂದು ಕಟೀಲು ಮೇಳ ಸೇರಿದರು. ಬೆಳ್ಮಣ್ಣು ಮತ್ತು ಬಪ್ಪನಾಡು ಮೇಳಗಳಲ್ಲೂ ಕೆಲವು ತಿರುಗಾಟ ಮಾಡಿದ್ದರು. ಪೀಠಿಕಾ ಮತ್ತು ಒಡ್ಡೋಲಗದ ಪಾತ್ರಗಳಿಂದ ಆರಂಭಗೊಂಡ ಇವರ ಯಕ್ಷಪಯಣ ಮುಂದೆ ಹವ್ಯಾಸಿ ಸಂಘಸಂಸ್ಥೆಗಳ ಆಟಗಳಲ್ಲಿ ಅತಿಕಾಯ, ರಕ್ತಬೀಜದಂತಹ ಪ್ರಮುಖ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸುವಷ್ಟು ಪ್ರೌಢತೆ ಸಾಧಿಸಿತ್ತು. ಅವರು ಪತ್ನಿ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಕಳೆದ ವರ್ಷ ಸಂಸ್ಥೆ ಕಟೀಲಿನಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ‘ಯಕ್ಷಗಾನಕಲಾರಂಗ ಪ್ರಶಸ್ತಿ’ ನೀಡಿ ಗೌರವಿಸಿತ್ತು. ವಸಂತ ಶೆಟ್ಟಿಯವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಹಿರಿಯ ಕಲಾವಿದ ಕುಂಬ್ಳೆ ಶ್ರೀಧರ ರಾವ್ ನಿಧನ

ತೆಂಕುತಿಟ್ಟಿನ ಪ್ರಸಿದ್ಧ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್ (76) ಹೃದಯಘಾತದಿಂದ ಇಂದು (05.07.2024) ನಿಧನರಾದರು. ಕುಂಬ್ಳೆ ಕಮಲಾಕ್ಷ ನಾಯಕ್ರಲ್ಲಿ ನಾಟ್ಯಾಭ್ಯಾಸ ಹಾಗೂ ಶೇಣಿ ಗೋಪಾಲಕೃಷ್ಣ ಭಟ್ಟರಿಂದ ಅರ್ಥಗಾರಿಕೆಯನ್ನು ಕಲಿತು, 13ನೇ ವಯಸ್ಸಿನಲ್ಲಿಯೇ ಕಲಾ ಸೇವೆಯನ್ನು ಆರಂಭಿಸಿದ ಇವರು ಕುಂಡಾವು, ಕೂಡ್ಲು, ಮುಲ್ಕಿ, ಕರ್ನಾಟಕ ಹಾಗೂ ದೀರ್ಘ ಕಾಲ ಧರ್ಮಸ್ಥಳ ಮೇಳ ಹೀಗೆ ನಿರಂತರ ಆರು ದಶಕಗಳ ಕಾಲ ಕಲಾಸೇವೆಗೈದಿದ್ದರು. ಆರಂಭದಲ್ಲಿ ಸ್ತ್ರೀ ವೇಷ, ಪುಂಡು ವೇಷಗಳನ್ನು ಮಾಡುತ್ತಿದ್ದು, ಅನಂತರ ರಾಜ ವೇಷಗಳನ್ನೇ ಹೆಚ್ಚಾಗಿ ಮಾಡುತ್ತಿದ್ದರು. ದಮಯಂತಿ, ಚಂದ್ರಮತಿ, ಸೀತೆ, ಶ್ರೀದೇವಿ, ಅಮ್ಮು ಬಳ್ಳಾಲ್ತಿ, ಶ್ರೀರಾಮ, ಶ್ರೀಕೃಷ್ಣ, ಅರ್ಜುನ, ಕರ್ಣ, ಭೀಷ್ಮ, ಧರ್ಮರಾಯ ಮೊದಲಾದ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ್ದರು. ದೆಹಲಿಯಲ್ಲಿ ರಾಷ್ಟ್ರಪತಿಗಳಿಂದ ಗೌರವಕ್ಕೆ ಪಾತ್ರರಾಗಿರುವ ಕುಂಬ್ಳೆ ಶ್ರೀಧರ ರಾಯರು ದುಬಾಯಿ, ಬೆಹರಿನ್ಗಳಲ್ಲಿಯೂ ವೇಷಗಳನ್ನು ಮಾಡಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಹಾಗೂ ಯಕ್ಷಗಾನ ಕಲಾರಂಗ ಸೇರಿದಂತೆ ವಿವಿಧ ಸಂಘಟನೆಗಳು ಇವರ ಪ್ರತಿಭೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದೆ. ಪತ್ನಿ, ಮೂವರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ನಿಷ್ಠಾವಂತ, ಸರಳ ಸಜ್ಜನಿಕೆಯ ಕಲಾವಿದರಾದ ಶ್ರೀಧರ ರಾಯರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ನಿಧನ
ಬಡಗು ತಿಟ್ಟಿನ ಪ್ರಸಿದ್ಧ ಭಾಗವತ, ರಾಜ್ಯ ಪ್ರಶಸ್ತಿ ಪುರಸ್ಕೃತ ಸುಬ್ರಹ್ಮಣ್ಯ ಧಾರೇಶ್ವರ (68) ಇಂದು ಮುಂಜಾನೆ ಬೆಂಗಳೂರಿನಲ್ಲಿ ನಿಧನರಾದರು.ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಎಂ.ನಾರ್ಣಪ್ಪ ಉಪ್ಪೂರರ ಶಿಷ್ಯರಾದ ಇವರು,ಕಾಳಿಂಗ ನಾವಡರ ಒಡನಾಡಿಯಾಗಿ ರಂಗ ಪ್ರವೇಶಿಸಿ, ವಿವಿಧ ಮೇಳಗಳಲ್ಲಿ ಮುಖ್ಯವಾಗಿ ಪೆರ್ಡೂರು ಮೇಳದ ಪ್ರಧಾನ ಭಾಗವತರಾಗಿ ಒಟ್ಟೂ ಸುಮಾರು ನಾಲ್ಕುವರೆ ದಶಕಗಳ ಕಲಾ ಸೇವೆ ಗೈದಿದ್ದರು. ತಮ್ಮ ಸುಮಧುರ ಕಂಠ,ಪರಂಪರೆಯ ಶೈಲಿ,ರಂಗ ತಂತ್ರದಿಂದ ಹಲವು ಪೌರಾಣಿಕ ಮತ್ತು ಹೊಸ ಪ್ರಸಂಗಗಳಿಗೆ ಜೀವ ತುಂಬಿದ್ದರು. ಯಕ್ಷಗಾನ ಕಲಾರಂಗ ಅವರಿಗೆ ನಾರ್ಣಪ್ಪ ಉಪ್ಪೂರರ ಪ್ರಶಸ್ತಿ ನೀಡಿ ಗೌರವಿಸಿತ್ತು. ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು. ಅವರು ಪತ್ನಿ, ಪುತ್ರ, ಪುತ್ರಿ ಹಾಗು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಅವರ ನಿಧನಕ್ಕೆಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್,ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.ಇಂದು ಸಂಜೆ ಕಿರಿಮಂಜೇಶ್ವರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

ಡಾ. ಅಮೃತ ಸೋಮೇಶ್ವರ ಅಗಲಿಕೆಗೆ ಕಲಾರಂಗದ ಸಂತಾಪ
ಡಾ. ಅಮೃತಸೋಮೇಶ್ವರರು ಇಂದು (06.01.2024) ನಿಧನರಾದರು. ಅವಿಭಜಿತ ದಕ್ಷಿಣಕನ್ನಡದ ಸುಮಾರು ಆರುದಶಕಗಳ ಸಾಂಸ್ಕೃತಿಕ ಚರಿತ್ರೆಯಲ್ಲಿ ಪ್ರಥಮ ಪಂಕ್ತಿಯ ಹೆಸರು ಅಮೃತಸೋಮೇಶ್ವರರದ್ದು. ಕವಿತೆ, ಪ್ರಬಂಧ, ನಾಟಕ, ಕತೆಗಳು, ಸಂಶೋಧನೆ ಹಲವು ವಿಭಾಗಗಳಲ್ಲಿ ಕೃಷಿ ನಡೆಸಿದವರು. ಹೊಸತಲೆಮಾರನ್ನು ಗಾಢವಾಗಿ ಪ್ರಭಾವಿಸಿ, ತಮ್ಮ ಸುತ್ತಮುತ್ತಲಿನ ಸಮಾಜವನ್ನು ಕ್ರಿಯಾಶೀಲವಾಗಿ, ಚಿಂತನಶೀಲವಾಗಿ ಸಿದ್ಧಗೊಳಿಸಿದವರು. ಯಕ್ಷಗಾನ ಪ್ರಸಂಗ ರಚನೆ, ಕಾರ್ಯಾಗಾರಗಳ ಆಯೋಜನೆಯ ಮೂಲಕ ಅವರು ನೀಡಿದ ಕೊಡುಗೆ ಸದಾಸ್ಮರಣೀಯ. ಯಕ್ಷಗಾನ ಕೃತಿಗಳಲ್ಲಿ ನವಚಿಂತನೆಯನ್ನು ಗುಪ್ತಗಾಮಿನಿಯಾಗಿಸಿದವರು. ತುಳುಪ್ರಸಂಗಗಳಿಗೆ ಕನ್ನಡಕ್ಕಿಂತ ಕಡಿಮೆ ಇಲ್ಲದ ಘನತೆಯನ್ನು ನೀಡಿದವರು. ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ಸ್ಮರಣೆಯಲ್ಲಿ ಯಕ್ಷಗಾನ ಕಲಾರಂಗ ನೀಡುವ ವಿದ್ವತ್ ಪ್ರಶಸ್ತಿಗೆ ಭಾಜನರಾಗಿದ್ದರು. ಇವರ ಬದುಕು-ಸಾಧನೆಯ ಕುರಿತು ಯಕ್ಷಗಾನ ಕಲಾರಂಗವು ವಿಚಾರಗೋಷ್ಠಿಯನ್ನು ಆಯೋಜಿಸಿತ್ತು. ಸಂಸ್ಥೆಯು ಕಲೆ, ಕಲಾವಿದರಿಗೆ, ವಿದ್ಯಾರ್ಥಿಗಳಿಗಾಗಿ ಮಾಡುವ ಕೆಲಸ ಕಾರ್ಯಗಳ ಬಗ್ಗೆ ಅಪಾರ ಆದರಾಭಿಮಾನವನ್ನು ಹೊಂದಿದ್ದ ಇವರು ಕಾರ್ಯಕರ್ತರನ್ನು ಪ್ರೋತ್ಸಾಹಿಸುತ್ತಿದ್ದರು. ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.
ಅಸಾಧಾರಣ ಸಾಧನೆ. ಸಜ್ಜನಿಕೆ.ಬಹು ವಿಧ ಪ್ರತಿಭೆ ಗಳ ವಿರಳ ಮಹೋನ್ನತ ಸಾಹಿತಿ ‘ಕರಾವಳಿಯ ಸಂಯುಕ್ತ ಸಂಸ್ಕೃತಿಯ ಪ್ರಾತಿನಿಧಿಕ ರು ಹಿರಿಯ ಮಿತ್ರ ಅಮೃತ ಸೋಮೇಶ್ವರ ಓರ್ವ ಸಾರ್ವಕಾಲಿಕ ಶ್ರೇಷ್ಠರು. – ಡಾ ಎಂ ಪ್ರಭಾಕರ ಜೋಶಿ ಸಂತಾಪ ಸೂಚಿಸಿದ್ದಾರೆ.

ಕರ್ಣಾಟಕ ಬ್ಯಾಂಕ್ನ ನಿವೃತ್ತ ಅಧ್ಯಕ್ಷ ಹಾಗೂ ಸಿ.ಇ.ಒ ಪಿ. ಜಯರಾಮ ಭಟ್
ಸಹೃದಯಿ ಕಲಾಪೋಷಕ, ದಕ್ಷ ಆಡಳಿತಗಾರ,ಕರ್ಣಾಟಕ ಬ್ಯಾಂಕ್ನ ನಿವೃತ್ತ ಅಧ್ಯಕ್ಷ ಹಾಗೂ ಸಿ.ಇ.ಒ. ಪಿ. ಜಯರಾಮ ಭಟ್ (71 ವರ್ಷ) ಇಂದು ದೈವಾಧೀನರಾದರು. ತಮ್ಮ ಅಧಿಕಾರಾವಧಿಯಲ್ಲಿ ಶಿಕ್ಷಣ,ಕಲೆ, ಸಾಹಿತ್ಯ , ಧರ್ಮ, ಸಂಸ್ಕೃತಿ ಮತ್ತು ಸಾಮಾಜಿಕ ಸಂಸ್ಥೆಗಳಿಗೆ ನಿರಂತರವಾಗಿ ನೆರವು ನೀಡುತ್ತಿದ್ದ ಸರಳ ಸಜ್ಜನಿಕೆಯ ಜಯರಾಮ ಭಟ್ಟರ ನಿಧನ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಗೆ ತುಂಬಿ ಬಾರದ ನಷ್ಟವಾಗಿದೆ. ಈ ಭಾಗದ ಯಕ್ಷಗಾನ ಸಂಘಟನೆಗಳಿಗೆ ಬ್ಯಾಂಕಿನ ಮೂಲಕ ಅವರು ನೀಡಿದ ಆರ್ಥಿಕ ಬೆಂಬಲ ಅವಿಸ್ಮರಣೀಯ. ಅವರಿಂದ ಉಪಕೃತರಾದವರಲ್ಲಿ ನಾವು, ನಮ್ಮ ಸಂಸ್ಥೆ ಸೇರಿದೆ.
ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಪೊಳಲಿ ಜಯರಾಮ ಭಟ್ಟರ ದಿವ್ಯಾತ್ಮಕ್ಕೆ ಶ್ರದ್ಧಾಂಜಲಿ

ಯಕ್ಷಗಾನ ಗುರು, ಭಾಗವತ ತೋನ್ಸೆ ಜಯಂತಕುಮಾರ್ ನಿಧನ
ಯಕ್ಷಗಾನ ಭಾಗವತರಾಗಿ, ಹಲವು ಯಕ್ಷಗಾನ ಸಂಘ ಮತ್ತು ಉಡುಪಿ ಯಕ್ಷಶಿಕ್ಷಣ ಟಸ್ಟ್ ನಲ್ಲಿ ಗುರುಗಳಾಗಿ ಸಾವಿರಾರು ಕಲಾವಿದರನ್ನು ಸಿದ್ಧಪಡಿಸಿದ ತೋನ್ಸೆ ಜಯಂತ ಕುಮಾರ್ (77) ಇಂದು (26- 6- 23) ಮುಂಜಾನೆ ನಿಧನರಾದರು. ಹಂಗಾರಕಟ್ಟೆ ಚೇತನಾ ಪ್ರೌಢ ಶಾಲೆಯ ಕಛೇರಿ ಅಧೀಕ್ಷಕರಾಗಿ ನಿವೃತ್ತರಾಗಿದ್ದ ತೋನ್ಸೆಯವರಿಗೆ ಯಕ್ಷಗಾನ ಪ್ರವೃತ್ತಿಯಾಗಿತ್ತು. ಸಂಚಾರಿ ಯಕ್ಷಗಾನ ಭಂಡಾರವೆಂದೇ ಖ್ಯಾತರಾಗಿದ್ದ ತೋನ್ಸೆ ಕಾಂತಪ್ಪ ಮಾಸ್ತರರ ಸುಪುತ್ರರಾಗಿದ್ದ ಇವರಿಗೆ ತಂದೆಯೇ ಯಕ್ಷಗಾನ ಗುರು. ಆರಂಭದಲ್ಲಿ ಯಕ್ಷಗಾನ ವೇಷಧಾರಿಯಾಗಿ ಆಮೇಲೆ ಯಕ್ಷಗಾನ ಗುರುಗಳಾಗಿ ಈ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದರು. ಉಡುಪಿ ಶಾಸಕರ ನೇತೃತ್ವದ ಯಕ್ಷಶಿಕ್ಷಣ ಟಸ್ಟ್ ನಲ್ಲಿ ಆರಂಭದಿಂದಲೂ ಗುರುಗಳಾಗಿ ಅದರ ಯಶಸ್ಸಿಗೆ ಕಾರಣರಾಗಿದ್ದರು. ಅವರು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಶ್ರೀರಾಮ ವಿಠಲ ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗೆ ಭಾಜನರಾಗಿದ್ದರು. ಅವರು ಪತ್ನಿ ಮೂವರು ಪುತ್ರರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ಸೂಚಿಸಿದ್ದಾರೆ. ನಾಳೆ ಬೆಳಿಗ್ಗೆ 9.00 ಗಂಟೆಗೆ ಅವರ ಸ್ವಗೃಹದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶವಿದೆ. 10.30ಕ್ಕೆ ಬೀಡಿನ ಗುಡ್ಡೆಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

ಕೆ.ಕೃಷ್ಣ ಮಧ್ಯಸ್ಥ ನಿಧನ
ಕೆ.ಕೃಷ್ಣ ಮಧ್ಯಸ್ಥ ಕಳೆದ ಶತಮಾನದ ಕೊನೆಯ ದಶಕಗಳಲ್ಲಿ ಕರಾವಳಿಯ ದಕ್ಷಣ ಕನ್ನಡ ದ ಕಾಸರಗೋಡು ಭಾಗದಿಂದ ಒಳನಾಡು ಮಲೆನಾಡು ಭಾಗಕ್ಕೆ ವಲಸೆ ಬಂದ ಪಂಡಿತ ಪರಂಪರೆಯ ಲ್ಲಿ ಅಳಿದುಳಿದವರನ್ನು ಕಳೆದುಕೊಳ್ಳುತ್ತಿದ್ದೇವೆ. ಕೆ.ಕೆ.ಮಧ್ಯಸ್ಥ ಕೆ.ಕೃಷ್ಣ ಮಧ್ಯಸ್ಥ ಬುಧವಾರ ಜೂನ್ 21 ರಂದು ತೀವ್ರ ಅನಾರೋಗ್ಯ ದಿಂದ ನಿಧನರಾಗಿದ್ದಾರೆ. ಭಾಷಾಪಂಡಿತರಾಗಿ, ಗಮಕ ವ್ಯಾಖ್ಯಾನ ಕಾರರಾಗಿ, ಯಕ್ಷಗಾನ ಪ್ರಸಂಗ ಕರ್ತ ರಾಗಿ, ವೇಷಧಾರಿಯಾಗಿ, ಅರ್ಥಧಾರಿಯಾಗಿ ಸಂದವರು. ಎಲ್ಲಕ್ಕಿಂತ ಮುಖ್ಯವಾಗಿ ಉತ್ತಮ ಶಿಕ್ಷಕರಾಗಿ ನಿಷ್ಠಾವಂತ ಪ್ರೇಕ್ಷಕರಾಗಿ ಮುಖ್ಯವಾಗುತ್ತಾರೆ.
ಗಡಿಭಾಗದ ಕಾಸರಗೋಡಿನ ಕುಂಜಾರು ಗ್ರಾಮದ ಈಶ್ವರ ಮಧ್ಯಸ್ಥ ಮತ್ತು ದೇವಕಿ ದಂಪತಿಯ ಪುತ್ರರಾಗಿ 1943 ರ ಜೂನ್ 2ರಂದು ಜನಿಸಿದವರು. ಇವರ ಹಿರಿಯ ಸಹೋದರ ನೀ.ನಾ. ಮಧ್ಯಸ್ಥ ಸಹ ತ್ರಿಭಾಷಾ ಪಂಡಿತರು, ಸಾಹಿತಿ ಹಾಗೂ ತಾಳಮದ್ದಲ್ಲಿ ಅರ್ಥದಾರಿಗಳು. ಮತ್ತೊಬ್ಬ ಸಹೋದರ ಬೆಳ್ತಂಗಡಿಯ ಸುಬ್ರಮಣ್ಯ ಮಧ್ಯಸ್ಥ ಕೂಡ ಈ ಇಬ್ಬರು ಸಹೋದರರಂತೆ ಸಾಹಿತಿ ಮತ್ತು ಯಕ್ಷಗಾನ ಕಲಾವಿದರು.
ಬಿ.ಎ., ಬಿ ಎಡ್ ಪದವೀಧರರಾದ ಕೆ.ಕೆ.ಮದ್ಯಸ್ಥರು 1965 ರ ಸುಮಾರಿಗೆ ಮಲೆನಾಡಿನ ಸಾಗರ ಪ್ರಾಂತ್ಯಕ್ಕೆ ಬಂದರು. ಬೆಳೆಯೂರಿನ ಶಾಲೆಯಲ್ಲಿ , ಸಾಗರದ ನಿರ್ಮಲ ಬಾಲಿಕಾ ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ಪತ್ನಿ ಗಿರಿಜಾ , ಇಬ್ಬರು ಪುತ್ರಿಯರು ಹಾಗೂ ಏಕೈಕ ಪುತ್ರ ಯಕ್ಷಗಾನ ಭಾಗವತ, ಅವಧಾನಿ ಪ್ರಶಾಂತ್ ಮಧ್ಯಸ್ಥ ಇದ್ದಾರೆ.
ಮಲೆನಾಡು ಗಮಕಲಾ ಸಂಘದ ಗಮಕ ಕಾರ್ಯಕ್ರಮಗಳಲ್ಲಿ ವ್ಯಾಖ್ಯಾನಕಾರರಾಗಿ ಭಾಗವಹಿಸಿದ್ದಾರೆ. ಸ್ಥಳೀಯ ತಾಳಮದ್ದಲೆ ಕೂಟಗಳಲ್ಲಿ ಅರ್ಥಧಾರಿಗಳಾಗಿ ತೊಡಗಿಸಿಕೊಂಡಿದ್ದರು. ಬೆಳೆಯೂರಿನ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಸೇರಿದಂತೆ ಸ್ಥಳೀಯ ಯಕ್ಷಗಾನ ಪ್ರದರ್ಶನಗಳಲ್ಲಿ ವೇಷಧಾರಿಯಾಗಿ ಸಂದಿದ್ದಾರೆ.
ಗೆಳೆಯ ಗೀತೆಗಳು, ನಾಟಕ ಕೃತಿಗಳಾದ ಸೋಲಿನಲ್ಲೂ ಗೆಲುವು, ಹೆಣ್ಣಿನ ಕೈವಾಡ, ಭಕ್ತಿ ಪರೀಕ್ಷೆ ,ಜ್ಞಾನಶ್ರೀ ಹಾಗು ಗೀತ ನಾಟಕಗಳಾದ ಶಾಕುಂತಲ, ಸೃಷ್ಟಿ ರಕ್ಷೆ, ಕ್ರಿಸ್ತ ಜನನ ಇನ್ನೂ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.6ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ ಕೆ.ಕೆ.ಮಧ್ಯಸ್ಥರು ಆಡಂಬರ ಇಲ್ಲದ, ಪ್ರಚಾರ ಬಯಸದ ಸರಳ ಸಜ್ಜನ. ಯಕ್ಷಗಾನ ಪ್ರಸಂಗ ಗಜೇಂದ್ರ ಮೋಕ್ಷ 2001ರಲ್ಲಿ ಪ್ರಕಟಗೊಂಡಿದ್ದು ದೊಡ್ಡ ಬಾಳೆ ಶ್ರೀ ಮಹಾಗಣಪತಿ ಯಕ್ಷಗಾನ ಕಲಾ ಸಂಘದ ರಜತ ವರ್ಷದ ಸವಿ ನೆನಪಿಗಾಗಿ ಸಮರ್ಪಿಸಲ್ಪಟ್ಟ ಕೃತಿಯಾಗಿದೆ. ವರದಾ ಮಹಾತ್ಮೆ, ಮಕ್ಕಳ ಯಕ್ಷಗಾನ ಪ್ರಸಂಗ ಶ್ರೀ ಕೃಷ್ಣ ಲೀಲೆ ಮುಂತಾದವು ಇವರು ರಚಿಸಿದ ಪ್ರಸಂಗ ಕೃತಿಗಳು. ಬೈಬಲ್ ಆಧಾರಿತ ಕ್ಷಮಾದಾನ, ರಾಣಿ ಸಾಧನ ಎಂಬ ಎರಡು ಕೃತಿಗಳು ಯಕ್ಷಗಾನ ಪ್ರಸಂಗ ರಚನಾ ಸಾಧ್ಯತೆ ಯನ್ನು ವಿಸ್ತರಿಸಿದ ಕೃತಿಗಳು. ಅಂಡೆ ಫುಸಲ ಫುಸ್ಕುಸೋಜರ ಕಾಳಗ ಎಂಬ ಅಣಕು ಯಕ್ಷಗಾನ ಪ್ರಸಂಗವನ್ನು ರಚಿಸುವ ಮೂಲಕ ಮಧ್ಯಸ್ಥರು ತಮ್ಮ ಪ್ರಸಂಗ ರಚನಾ ಸಾಮರ್ಥ್ಯವನ್ನು ಮೆರೆದಿದ್ದಾರೆ.
ಸುಮಾರು 33 ವರ್ಷಗಳ ಕಾಲ ನಿರ್ಮಲಾ ಬಾಲಿಕಾ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಮಧ್ಯಸ್ಥರು ತಮ್ಮ ಸಹೋದ್ಯೋಗಿಗಳ ಹಾಗೂ ವಿದ್ಯಾರ್ಥಿ ಸಮುದಾಯದ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದರು.
ನಿವೃತ್ತಿಯ ನಂತರವೂ ಕ್ರಿಯಾಶೀಲತೆ ಕಾಪಾಡಿಕೊಂಡಿದ್ದ ಕೃಷ್ಣ ಮಧ್ಯಸ್ಥರು ಯಾವುದೇ ಕಲಾ ಪ್ರಕಾರಗಳ ಪ್ರದರ್ಶನವನ್ನು ಪ್ರೇಕ್ಷಕರಾಗಿ ಆಸ್ವಾದಿಸುತ್ತಿದ್ದರು. ರಂಗಪ್ರಸ್ತುತಿಯ ಗುಣಾವಗುಣಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸುತ್ತಿದ್ದರು. ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ, ಪ್ರದರ್ಶನಗಳಲ್ಲಿ ತಾವು ಮೆಚ್ಚಿಕೊಂಡು ಆಸ್ವಾದಿಸಿದ ಸಂಗತಿಗಳನ್ನು ಸಮಾನ ಮನಸ್ಕರ ಜೊತೆ ಹಂಚಿಕೊಂಡು ಸಂಭ್ರಮಿಸುತಿದ್ದರು. ಆರ್ಥಿಕ ವೆಚ್ಚದ ಲೆಕ್ಕಾಚಾರವಿಲ್ಲದೆ ಪ್ರದರ್ಶನ ವೀಕ್ಷಿಸುವ ಏಕೋದ್ದೇಶದಿಂದ ಪರಸ್ಥಳಗಳಿಗೆ ಹೋಗಿ, ಖಾಸಗಿ ವಸತಿ ಗ್ರಹಗಳಲ್ಲಿ ವಾಸ್ತವ್ಯ ಮಾಡಿ ಪ್ರದರ್ಶನ ವೀಕ್ಷಿಸುತ್ತಿದ್ದರು. ಸೃಜನಶೀಲತೆ, ಸಹೃದಯತೆ ಮೇಳವಿಸಿದ್ದ ಮಧ್ಯಸ್ಥರು ನೇತ್ರದಾನ ಮತ್ತು ಅಂಗಾಂಗ ದಾನಗಳ ಮೂಲಕವೂ ತಮ್ಮ ಜೀವನಾದರ್ಶನವನ್ನು ಮಾಡಿಕೊಂಡಿದ್ದಾರೆ. ಮಣಿಪಾಲದ ಆಸ್ಪತ್ರೆಗೆ ಅಂಗಾಂಗಗಳನ್ನು, ಶಿವಮೊಗ್ಗದ ಶಂಕರ್ ಆಸ್ಪತ್ರೆಗೆ ನೇತ್ರಗಳನ್ನು ಕೆ.ಕೆ.ಮಧ್ಯಸ್ಥರು ದಾನ ಮಾಡಿದ್ದಾರೆ. ಕೆಲಕಾಲ
ಗೊರ ಮನೆಯಲ್ಲಿ ವಾಸವಾಗಿದ್ದ ಮಧ್ಯಸ್ಥರು ಅಂತ್ಯ ಕಾಲದಲ್ಲಿ ಸಾಗರದ ಜೋಗ ರಸ್ತೆಯ ಕೆಇಬಿ ಪಕ್ಕದ ವಿನೋಬಾ ನಗರದಲ್ಲಿ ವಾಸವಾಗಿದ್ದರು.

ಎಸ್. ಎನ್. ಪಂಜಾಜೆ ವಿಧಿವಶ
ಎಸ್. ಎನ್. ಪಂಜಾಜೆ ಎಂದೆ ಪ್ರಸಿಸದ್ಧರಾಗಿದ್ದ ಪಂಜಾಜೆ ಸೂರ್ಯನಾರಾಯಣ ಭಟ್ (71) ಇಂದು (22-05-2023) ಇಹಲೋಕ ಯಾತ್ರೆ ಮುಗಿಸಿದರು. ತಾವೇ ಸ್ಥಾಪಿಸಿದ ಕರ್ನಾಟಕ ಸಾಂಸ್ಕøತಿಕ ಕಲಾ ಪ್ರತಿಷ್ಠಾನ (ರಿ.) ಬೆಂಗಳೂರು ಮೂಲಕ 15 ಯಕ್ಷಗಾನ ಸಾಹಿತ್ಯ ಸಮ್ಮೇಳನ ನಡೆಸಿದ್ದರು. ನಾಡಿನ ರಾಜಧಾನಿಯಲ್ಲಿದ್ದು ಯಕ್ಷಗಾನದ ಕಲಿಕೆ, ಪ್ರಸಾರ, ಪ್ರದರ್ಶನ ಮತ್ತು ಚಿಂತನೆಗೆ ಸಂಬಂಧಿಸಿ ಅವರು ಮಾಡಿದ ಕೆಲಸ ದಾಖಲಾರ್ಹವಾದುದು. ಕರ್ನಾಟಕದ ಯಕ್ಷಗಾನ ಪ್ರದೇಶಗಳಲ್ಲದೆ, ಅನ್ಯಾನ್ಯ ಜಿಲ್ಲೆಗಳಲ್ಲಿ, ಮುಂಬೈಯಲ್ಲಿ ಸಮ್ಮೇಳನವನ್ನು ವಿಶಿಷ್ಟವಾಗಿ ನಡೆಸಿದ ಖ್ಯಾತಿಗೆ ಭಾಜನರಾಗಿದ್ದಾರೆ. ಪ್ರತೀ ಸಮ್ಮೇಳನದಲ್ಲೂ ಯಕ್ಷಗಾನ ಹಿರಿಯ ಸಾಧಕರಿಗೆ ಸಮ್ಮೇಳನಾಧ್ಯಕ್ಷ ಪಟ್ಟ ನೀಡಿ, ಹಲವರನ್ನು ಗೌರವಿಸುತ್ತಾ ಸಂತೋಷ ಪಟ್ಟಿದ್ದರು. ಹತ್ತು ವರ್ಷದ ಹಿಂದೆ ಬೆಂಗಳೂರಿನಲ್ಲಿ ನಡೆದ ಯಕ್ಷಗಾನ ಸಮ್ಮೇಳನದಲ್ಲಿ ನಮ್ಮ ಸಂಸ್ಥೆಗೆ ಪ್ರಶಸ್ತಿ ನೀಡಿ ಗೌರವಿಸಿದ್ದರು. ಉಡುಪಿಯಲ್ಲಿ ಜರಗಿದ ಪ್ರಥಮ ಕರ್ನಾಟಕ ಯಕ್ಷಗಾನ ಸಮ್ಮೇಳನದಲ್ಲಿ ಅವರನ್ನು ಸಮ್ಮೇಳನದ ಪ್ರಶಸ್ತಿ ನೀಡಿ ಪುರಸ್ಕರಿಸಿದ ನೆನಪು ಹಸಿರಾಗಿದೆ. ಅವರು ಪತ್ನಿ, ಪುತ್ರ ಮತ್ತು ಅಸಂಖ್ಯಾತ ಯಕ್ಷಗಾನ ಪ್ರೇಮಿಗಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ವಿಶಿಷ್ಟ ಪ್ರತಿಭೆ, ಬಹುಮುಖೀ ಸಾಧಕ, ರಂಗಭೂಮಿ ಮತ್ತು ಯಕ್ಷಗಾನ ಕಲಾವಿದ, ಸಂಘಟನಾ ಚತುರ ಪಂಜಾಜೆ ಸೂರ್ಯನಾರಾಯಣ ಭಟ್ಟರು ಇನ್ನಿಲ್ಲವೆಂಬ ಸುದ್ದಿ ಇದೀಗ ಬಂತು.ಎಸ್.ಎನ್ ಪಂಜಾಜೆ ಎಂದೇ ಖ್ಯಾತರಾದ ಈ ಕಲಾರಾಧಕ ಏಕಾಂಗವೀರರಾಗಿ ಸುಮಾರು ಹದಿನೈದರಷ್ಟು ಅಖಿಲಭಾರತ ಯಕ್ಷಗಾನ ಸಮ್ಮೇಳನಗಳನ್ನು ನಡೆಸಿದ್ದರು. ಕೊನೆಯದನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಸಲು ಯೋಜಿಸಿದ್ದರು. ಯಕ್ಷಗಾನವಲ್ಲದೆ ಅದನ್ನು ಹೊಂದಿಕೊಂಡಿರುವ ಅನೇಕ ಕಲಾಪ್ರಕಾರಗಳ ಪ್ರದರ್ಶನಗಳನ್ನು ನಾಡಿನಾದ್ಯಂತ ಸಂಯೋಜನೆ ಮಾಡಿ ಸೈ ಎನ್ನಿಸಿಕೊಂಡ ಪಂಜಾಜೆ ನಮ್ಮದೇ ಬಳಗದ ಸ್ನೇಹಜೀವಿ. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ಅವರ ಆಕಸ್ಮಿಕ ನಿಧನ ಅನಿರೀಕ್ಷಿತ ದುರ್ವಾರ್ತೆಯಾಗಿ ಅತೀವ ನೋವು ತಂತು. ಅವರಿಗೆ ದೇವರು ಸದ್ಗತಿ ನೀಡಲಿ.
–ಭಾಸ್ಕರ ರೈ ಕುಕ್ಕುವಳ್ಳಿ

ಮಿಜಾರು ರಾಮಕೃಷ್ಣ ಶೆಟ್ಟಿಗಾರ್ ನಿಧನ
ತೆಂಕುತಿಟ್ಟಿನ ಹಿರಿಯ ಚಂಡೆ-ಮದ್ದಲೆ ವಾದಕರಾದ ಮಿಜಾರು ರಾಮಕೃಷ್ಣ ಶೆಟ್ಟಿಗಾರ್ (76 ವರ್ಷ) 21-05-2023ರಂದು ಅಶ್ವತ್ಥಪುರದ ಮಿಜಾರಿನಲ್ಲಿ ನಿಧನರಾದರು. ಕೂಡ್ಲು, ಮಂಗಳಾದೇವಿ, ಉಳ್ಳಾಲ ಭಗವತಿ ಮತ್ತು 25 ವರ್ಷಕ್ಕೂ ಮೇಲ್ಪಟ್ಟು ಕಟೀಲು ಮೇಳದಲ್ಲಿ ಹೆಚ್ಚಿನ ಪ್ರಸಿದ್ಧ ಭಾಗವತರಿಗೆ ಚಂಡೆ-ಮದ್ದಲೆ ವಾದಕರಾಗಿ ಕಲಾಸೇವೆಗೈದಿದ್ದರು. ಪೂರ್ವರಂಗದ ಹಾಡುಗಳನ್ನು ಹಾಡುವ ಕ್ರಮವನ್ನು ತಿಳಿದಿದ್ದರು. 2020ರಲ್ಲಿ ಇವರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಗೌರವಿಸಿತ್ತು. ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರನ್ನು ಹಾಗೂ ಅಪಾರ ಕಲಾಭಿಮಾನಿಗಳನ್ನು ಅಗಲಿದ್ದಾರೆ. ಇವರ ಅಗಲಿಕೆಗೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.
ರಂಗದಲ್ಲೇ ಹೃದಯಾಘಾತದಿಂದ ಕುಸಿದು ಕಲಾವಿದ ನಿಧನ
ನಿನ್ನೆ 22-12-2022ರಂದು ಕಟೀಲಿನ ಸರಸ್ವತಿ ಸದನದಲ್ಲಿ ತ್ರಿಜನ್ಮ ಮೋಕ್ಷದ ಶಿಶಿಪಾಲನ ಪಾತ್ರದಲ್ಲಿರುವಾಗಲೇ ಕಲಾವಿದ ಪ್ರಸಂಗಕರ್ತ ಗುರುವಪ್ಪ ಬಾಯಾರು (58) ನಿಧನ ಹೊಂದಿದರು. ಕಾಸರಗೋಡು ಸಮೀಪದ ಬಾಯಾರಿನ ಕರಿಯ ದೇವಾಡಿಗ – ಸರಸ್ವತೀ ದಂಪತಿ ಮಗನಾದ ಗುರುವಪ್ಪರು 10ನೇ ತರಗತಿಯವರೆಗೆ ಓದಿ ಉಪಜೀವಿತಕ್ಕೆ ಹೋಟೆಲ್ನಲ್ಲಿ ಉದ್ಯೋಗಿಯಾಗಿದ್ದರು. ಎಳವೆಯಲ್ಲೇ ಯಕ್ಷಗಾನಾಸಕ್ತರಾದ ಇವರು ಕಾವೂರು ಕೇಶವರಿಂದ ಯಕ್ಷಗಾನ ನಾಟ್ಯಭ್ಯಾಸ ಮಾಡಿದ್ದರು. ಡಾ. ಶಿಮಂತೂರು ನಾರಾಯಣ ಶೆಟ್ಟರಲ್ಲಿ ಛಂದಸ್ಸು ಅಧ್ಯಯನ ಮಾಡಿ ತುಳುವಿನಲ್ಲಿ ಅತ್ಯಂತ ಪ್ರಸಿದ್ಧಿ ಪಡೆದ ಗಟ್ಟದ ಗರುಡೆ ಸಹಿ10ಕ್ಕೂ ಹೆಚ್ಚು ಪ್ರಸಂಗಗಳನ್ನು ರಚಿಸಿದ್ದಾರೆ. ತೆಂಕುತಿಟ್ಟಿನ ಕುಂಬಳೆ, ಮಂಗಳಾದೇವಿ ಹಾಗೂ ಪುತ್ತೂರು ಮೇಳಗಳಲ್ಲಿ ಇವರ ಪ್ರಸಂಗಗಳು ಜಯಭೇರಿ ಬಾರಿಸಿದ್ದವು. ಗಣೇಶಪುರ, ಸಸಿಹಿತ್ಲು, ಬಪ್ಪನಾಡು ಮೇಳಗಳಲ್ಲಿ ತಿರುಗಾಟ ಮಾಡಿ ಕಿರೀಟ ವೇಷಧಾರಿಯಾಗಿ ಗುರುತಿಸಿಕೊಂಡಿದ್ದರು. ಕಳೆದ 9 ವರ್ಷಗಳಿಂದ ಕಟೀಲು ಮೇಳದಲ್ಲಿ ವೇಷಧಾರಿಯಾಗಿ ಸೇವೆಸಲ್ಲಿಸುತ್ತಿದ್ದರು. ದೇವಿ ಮಹಾತ್ಮೆಯ ಮಧುಕೈಟಪ, ದೇವೇಂದ್ರ, ವಿದ್ಯುನ್ಮಾಲಿ, ಶತೃಘ್ನ ಮೊದಲಾದ ಪಾತ್ರಗಳು ಇವರಿಗೆ ವಿಶೇಷ ಕೀರ್ತಿ ತಂದಿವೆ. ಹೆಂಡತಿ ಮತ್ತು ನಾಲ್ಕು ಗಂಡು ಮಕ್ಕಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.