Obituary

ಡಾ. ಅಮೃತ ಸೋಮೇಶ್ವರ ಅಗಲಿಕೆಗೆ ಕಲಾರಂಗದ ಸಂತಾಪ

ಡಾ. ಅಮೃತ ಸೋಮೇಶ್ವರ ಅಗಲಿಕೆಗೆ ಕಲಾರಂಗದ ಸಂತಾಪ

ಡಾ. ಅಮೃತಸೋಮೇಶ್ವರರು ಇಂದು (06.01.2024) ನಿಧನರಾದರು. ಅವಿಭಜಿತ ದಕ್ಷಿಣಕನ್ನಡದ ಸುಮಾರು ಆರುದಶಕಗಳ ಸಾಂಸ್ಕೃತಿಕ ಚರಿತ್ರೆಯಲ್ಲಿ ಪ್ರಥಮ ಪಂಕ್ತಿಯ ಹೆಸರು ಅಮೃತಸೋಮೇಶ್ವರರದ್ದು. ಕವಿತೆ, ಪ್ರಬಂಧ, ನಾಟಕ, ಕತೆಗಳು, ಸಂಶೋಧನೆ ಹಲವು ವಿಭಾಗಗಳಲ್ಲಿ ಕೃಷಿ ನಡೆಸಿದವರು. ಹೊಸತಲೆಮಾರನ್ನು ಗಾಢವಾಗಿ ಪ್ರಭಾವಿಸಿ, ತಮ್ಮ ಸುತ್ತಮುತ್ತಲಿನ ಸಮಾಜವನ್ನು ಕ್ರಿಯಾಶೀಲವಾಗಿ, ಚಿಂತನಶೀಲವಾಗಿ ಸಿದ್ಧಗೊಳಿಸಿದವರು. ಯಕ್ಷಗಾನ ಪ್ರಸಂಗ ರಚನೆ, ಕಾರ್ಯಾಗಾರಗಳ ಆಯೋಜನೆಯ ಮೂಲಕ ಅವರು ನೀಡಿದ ಕೊಡುಗೆ ಸದಾಸ್ಮರಣೀಯ. ಯಕ್ಷಗಾನ ಕೃತಿಗಳಲ್ಲಿ ನವಚಿಂತನೆಯನ್ನು ಗುಪ್ತಗಾಮಿನಿಯಾಗಿಸಿದವರು. ತುಳುಪ್ರಸಂಗಗಳಿಗೆ ಕನ್ನಡಕ್ಕಿಂತ ಕಡಿಮೆ ಇಲ್ಲದ ಘನತೆಯನ್ನು ನೀಡಿದವರು. ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ಸ್ಮರಣೆಯಲ್ಲಿ ಯಕ್ಷಗಾನ ಕಲಾರಂಗ ನೀಡುವ ವಿದ್ವತ್ ಪ್ರಶಸ್ತಿಗೆ ಭಾಜನರಾಗಿದ್ದರು. ಇವರ ಬದುಕು-ಸಾಧನೆಯ ಕುರಿತು ಯಕ್ಷಗಾನ ಕಲಾರಂಗವು ವಿಚಾರಗೋಷ್ಠಿಯನ್ನು ಆಯೋಜಿಸಿತ್ತು. ಸಂಸ್ಥೆಯು ಕಲೆ, ಕಲಾವಿದರಿಗೆ, ವಿದ್ಯಾರ್ಥಿಗಳಿಗಾಗಿ ಮಾಡುವ ಕೆಲಸ ಕಾರ್ಯಗಳ ಬಗ್ಗೆ ಅಪಾರ ಆದರಾಭಿಮಾನವನ್ನು ಹೊಂದಿದ್ದ ಇವರು ಕಾರ್ಯಕರ್ತರನ್ನು ಪ್ರೋತ್ಸಾಹಿಸುತ್ತಿದ್ದರು. ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

ಅಸಾಧಾರಣ ಸಾಧನೆ. ಸಜ್ಜನಿಕೆ.ಬಹು ವಿಧ ಪ್ರತಿಭೆ ಗಳ ವಿರಳ ಮಹೋನ್ನತ ಸಾಹಿತಿ ‘ಕರಾವಳಿಯ ಸಂಯುಕ್ತ ಸಂಸ್ಕೃತಿಯ ಪ್ರಾತಿನಿಧಿಕ ರು ಹಿರಿಯ ಮಿತ್ರ ಅಮೃತ ಸೋಮೇಶ್ವರ ಓರ್ವ ಸಾರ್ವಕಾಲಿಕ ಶ್ರೇಷ್ಠರು. – ಡಾ ಎಂ ಪ್ರಭಾಕರ ಜೋಶಿ ಸಂತಾಪ ಸೂಚಿಸಿದ್ದಾರೆ.


ಕರ್ಣಾಟಕ ಬ್ಯಾಂಕ್‍ನ ನಿವೃತ್ತ ಅಧ್ಯಕ್ಷ ಹಾಗೂ ಸಿ.ಇ.ಒ  ಪಿ. ಜಯರಾಮ ಭಟ್

ಕರ್ಣಾಟಕ ಬ್ಯಾಂಕ್‍ನ ನಿವೃತ್ತ ಅಧ್ಯಕ್ಷ ಹಾಗೂ ಸಿ.ಇ.ಒ ಪಿ. ಜಯರಾಮ ಭಟ್

ಸಹೃದಯಿ ಕಲಾಪೋಷಕ, ದಕ್ಷ ಆಡಳಿತಗಾರ,ಕರ್ಣಾಟಕ ಬ್ಯಾಂಕ್‍ನ ನಿವೃತ್ತ ಅಧ್ಯಕ್ಷ ಹಾಗೂ ಸಿ.ಇ.ಒ. ಪಿ. ಜಯರಾಮ ಭಟ್ (71 ವರ್ಷ) ಇಂದು ದೈವಾಧೀನರಾದರು. ತಮ್ಮ ಅಧಿಕಾರಾವಧಿಯಲ್ಲಿ ಶಿಕ್ಷಣ,ಕಲೆ, ಸಾಹಿತ್ಯ , ಧರ್ಮ, ಸಂಸ್ಕೃತಿ ಮತ್ತು ಸಾಮಾಜಿಕ ಸಂಸ್ಥೆಗಳಿಗೆ ನಿರಂತರವಾಗಿ ನೆರವು‌ ನೀಡುತ್ತಿದ್ದ ಸರಳ ಸಜ್ಜನಿಕೆಯ ಜಯರಾಮ ಭಟ್ಟರ ನಿಧನ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಗೆ ತುಂಬಿ ಬಾರದ ನಷ್ಟವಾಗಿದೆ. ಈ ಭಾಗದ ಯಕ್ಷಗಾನ ಸಂಘಟನೆಗಳಿಗೆ ಬ್ಯಾಂಕಿನ ಮೂಲಕ ಅವರು ನೀಡಿದ ಆರ್ಥಿಕ ಬೆಂಬಲ ಅವಿಸ್ಮರಣೀಯ. ಅವರಿಂದ ಉಪಕೃತರಾದವರಲ್ಲಿ ನಾವು, ನಮ್ಮ ಸಂಸ್ಥೆ ಸೇರಿದೆ.
ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಪೊಳಲಿ ಜಯರಾಮ ಭಟ್ಟರ ದಿವ್ಯಾತ್ಮಕ್ಕೆ ಶ್ರದ್ಧಾಂಜಲಿ

ಯಕ್ಷಗಾನ ಗುರು, ಭಾಗವತ ತೋನ್ಸೆ ಜಯಂತಕುಮಾರ್ ನಿಧನ

ಯಕ್ಷಗಾನ ಗುರು, ಭಾಗವತ ತೋನ್ಸೆ ಜಯಂತಕುಮಾರ್ ನಿಧನ

ಯಕ್ಷಗಾನ ಭಾಗವತರಾಗಿ, ಹಲವು ಯಕ್ಷಗಾನ ಸಂಘ ಮತ್ತು ಉಡುಪಿ ಯಕ್ಷಶಿಕ್ಷಣ ಟಸ್ಟ್ ನಲ್ಲಿ ಗುರುಗಳಾಗಿ ಸಾವಿರಾರು ಕಲಾವಿದರನ್ನು ಸಿದ್ಧಪಡಿಸಿದ ತೋನ್ಸೆ ಜಯಂತ ಕುಮಾರ್ (77) ಇಂದು (26- 6- 23) ಮುಂಜಾನೆ ನಿಧನರಾದರು. ಹಂಗಾರಕಟ್ಟೆ ಚೇತನಾ ಪ್ರೌಢ ಶಾಲೆಯ ಕಛೇರಿ ಅಧೀಕ್ಷಕರಾಗಿ ನಿವೃತ್ತರಾಗಿದ್ದ ತೋನ್ಸೆಯವರಿಗೆ ಯಕ್ಷಗಾನ ಪ್ರವೃತ್ತಿಯಾಗಿತ್ತು. ಸಂಚಾರಿ ಯಕ್ಷಗಾನ ಭಂಡಾರವೆಂದೇ ಖ್ಯಾತರಾಗಿದ್ದ ತೋನ್ಸೆ ಕಾಂತಪ್ಪ ಮಾಸ್ತರರ ಸುಪುತ್ರರಾಗಿದ್ದ ಇವರಿಗೆ ತಂದೆಯೇ ಯಕ್ಷಗಾನ ಗುರು. ಆರಂಭದಲ್ಲಿ ಯಕ್ಷಗಾನ ವೇಷಧಾರಿಯಾಗಿ ಆಮೇಲೆ ಯಕ್ಷಗಾನ ಗುರುಗಳಾಗಿ ಈ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದರು. ಉಡುಪಿ ಶಾಸಕರ ನೇತೃತ್ವದ ಯಕ್ಷಶಿಕ್ಷಣ ಟಸ್ಟ್ ನಲ್ಲಿ ಆರಂಭದಿಂದಲೂ ಗುರುಗಳಾಗಿ ಅದರ ಯಶಸ್ಸಿಗೆ ಕಾರಣರಾಗಿದ್ದರು. ಅವರು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಶ್ರೀರಾಮ ವಿಠಲ ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗೆ ಭಾಜನರಾಗಿದ್ದರು. ಅವರು ಪತ್ನಿ ಮೂವರು ಪುತ್ರರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ಸೂಚಿಸಿದ್ದಾರೆ. ನಾಳೆ ಬೆಳಿಗ್ಗೆ 9.00 ಗಂಟೆಗೆ ಅವರ ಸ್ವಗೃಹದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶವಿದೆ. 10.30ಕ್ಕೆ ಬೀಡಿನ ಗುಡ್ಡೆಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

ಕೆ.ಕೃಷ್ಣ ಮಧ್ಯಸ್ಥ ನಿಧನ

ಕೆ.ಕೃಷ್ಣ ಮಧ್ಯಸ್ಥ ನಿಧನ

ಕೆ.ಕೃಷ್ಣ ಮಧ್ಯಸ್ಥ ಕಳೆದ ಶತಮಾನದ ಕೊನೆಯ ದಶಕಗಳಲ್ಲಿ ಕರಾವಳಿಯ ದಕ್ಷಣ ಕನ್ನಡ ದ ಕಾಸರಗೋಡು ಭಾಗದಿಂದ ಒಳನಾಡು ಮಲೆನಾಡು ಭಾಗಕ್ಕೆ ವಲಸೆ ಬಂದ ಪಂಡಿತ ಪರಂಪರೆಯ ಲ್ಲಿ ಅಳಿದುಳಿದವರನ್ನು ಕಳೆದುಕೊಳ್ಳುತ್ತಿದ್ದೇವೆ. ಕೆ.ಕೆ.ಮಧ್ಯಸ್ಥ ಕೆ.ಕೃಷ್ಣ ಮಧ್ಯಸ್ಥ ಬುಧವಾರ ಜೂನ್ 21 ರಂದು ತೀವ್ರ ಅನಾರೋಗ್ಯ ದಿಂದ ನಿಧನರಾಗಿದ್ದಾರೆ. ಭಾಷಾಪಂಡಿತರಾಗಿ, ಗಮಕ ವ್ಯಾಖ್ಯಾನ ಕಾರರಾಗಿ, ಯಕ್ಷಗಾನ ಪ್ರಸಂಗ ಕರ್ತ ರಾಗಿ, ವೇಷಧಾರಿಯಾಗಿ, ಅರ್ಥಧಾರಿಯಾಗಿ ಸಂದವರು. ಎಲ್ಲಕ್ಕಿಂತ ಮುಖ್ಯವಾಗಿ ಉತ್ತಮ ಶಿಕ್ಷಕರಾಗಿ ನಿಷ್ಠಾವಂತ ಪ್ರೇಕ್ಷಕರಾಗಿ ಮುಖ್ಯವಾಗುತ್ತಾರೆ.

ಗಡಿಭಾಗದ ಕಾಸರಗೋಡಿನ ಕುಂಜಾರು ಗ್ರಾಮದ ಈಶ್ವರ ಮಧ್ಯಸ್ಥ ಮತ್ತು ದೇವಕಿ ದಂಪತಿಯ ಪುತ್ರರಾಗಿ 1943 ರ ಜೂನ್ 2ರಂದು ಜನಿಸಿದವರು. ಇವರ ಹಿರಿಯ ಸಹೋದರ ನೀ.ನಾ. ಮಧ್ಯಸ್ಥ ಸಹ ತ್ರಿಭಾಷಾ ಪಂಡಿತರು, ಸಾಹಿತಿ ಹಾಗೂ ತಾಳಮದ್ದಲ್ಲಿ ಅರ್ಥದಾರಿಗಳು. ಮತ್ತೊಬ್ಬ ಸಹೋದರ ಬೆಳ್ತಂಗಡಿಯ ಸುಬ್ರಮಣ್ಯ ಮಧ್ಯಸ್ಥ ಕೂಡ ಈ ಇಬ್ಬರು ಸಹೋದರರಂತೆ ಸಾಹಿತಿ ಮತ್ತು ಯಕ್ಷಗಾನ ಕಲಾವಿದರು.

ಬಿ.ಎ., ಬಿ ಎಡ್ ಪದವೀಧರರಾದ ಕೆ.ಕೆ.ಮದ್ಯಸ್ಥರು 1965 ರ ಸುಮಾರಿಗೆ ಮಲೆನಾಡಿನ ಸಾಗರ ಪ್ರಾಂತ್ಯಕ್ಕೆ ಬಂದರು. ಬೆಳೆಯೂರಿನ ಶಾಲೆಯಲ್ಲಿ , ಸಾಗರದ ನಿರ್ಮಲ ಬಾಲಿಕಾ ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ಪತ್ನಿ ಗಿರಿಜಾ , ಇಬ್ಬರು ಪುತ್ರಿಯರು ಹಾಗೂ ಏಕೈಕ ಪುತ್ರ ಯಕ್ಷಗಾನ ಭಾಗವತ, ಅವಧಾನಿ ಪ್ರಶಾಂತ್ ಮಧ್ಯಸ್ಥ ಇದ್ದಾರೆ.

ಮಲೆನಾಡು ಗಮಕಲಾ ಸಂಘದ ಗಮಕ ಕಾರ್ಯಕ್ರಮಗಳಲ್ಲಿ ವ್ಯಾಖ್ಯಾನಕಾರರಾಗಿ ಭಾಗವಹಿಸಿದ್ದಾರೆ. ಸ್ಥಳೀಯ ತಾಳಮದ್ದಲೆ ಕೂಟಗಳಲ್ಲಿ ಅರ್ಥಧಾರಿಗಳಾಗಿ ತೊಡಗಿಸಿಕೊಂಡಿದ್ದರು. ಬೆಳೆಯೂರಿನ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಸೇರಿದಂತೆ ಸ್ಥಳೀಯ ಯಕ್ಷಗಾನ ಪ್ರದರ್ಶನಗಳಲ್ಲಿ ವೇಷಧಾರಿಯಾಗಿ ಸಂದಿದ್ದಾರೆ.

ಗೆಳೆಯ ಗೀತೆಗಳು, ನಾಟಕ ಕೃತಿಗಳಾದ ಸೋಲಿನಲ್ಲೂ ಗೆಲುವು, ಹೆಣ್ಣಿನ ಕೈವಾಡ, ಭಕ್ತಿ ಪರೀಕ್ಷೆ ,ಜ್ಞಾನಶ್ರೀ ಹಾಗು ಗೀತ ನಾಟಕಗಳಾದ ಶಾಕುಂತಲ, ಸೃಷ್ಟಿ ರಕ್ಷೆ, ಕ್ರಿಸ್ತ ಜನನ ಇನ್ನೂ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.6ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ ಕೆ.ಕೆ.ಮಧ್ಯಸ್ಥರು ಆಡಂಬರ ಇಲ್ಲದ, ಪ್ರಚಾರ ಬಯಸದ ಸರಳ ಸಜ್ಜನ. ಯಕ್ಷಗಾನ ಪ್ರಸಂಗ ಗಜೇಂದ್ರ ಮೋಕ್ಷ 2001ರಲ್ಲಿ ಪ್ರಕಟಗೊಂಡಿದ್ದು ದೊಡ್ಡ ಬಾಳೆ ಶ್ರೀ ಮಹಾಗಣಪತಿ ಯಕ್ಷಗಾನ ಕಲಾ ಸಂಘದ ರಜತ ವರ್ಷದ ಸವಿ ನೆನಪಿಗಾಗಿ ಸಮರ್ಪಿಸಲ್ಪಟ್ಟ ಕೃತಿಯಾಗಿದೆ. ವರದಾ ಮಹಾತ್ಮೆ, ಮಕ್ಕಳ ಯಕ್ಷಗಾನ ಪ್ರಸಂಗ ಶ್ರೀ ಕೃಷ್ಣ ಲೀಲೆ ಮುಂತಾದವು ಇವರು ರಚಿಸಿದ ಪ್ರಸಂಗ ಕೃತಿಗಳು. ಬೈಬಲ್ ಆಧಾರಿತ ಕ್ಷಮಾದಾನ, ರಾಣಿ ಸಾಧನ ಎಂಬ ಎರಡು ಕೃತಿಗಳು ಯಕ್ಷಗಾನ ಪ್ರಸಂಗ ರಚನಾ ಸಾಧ್ಯತೆ ಯನ್ನು ವಿಸ್ತರಿಸಿದ ಕೃತಿಗಳು. ಅಂಡೆ ಫುಸಲ ಫುಸ್ಕುಸೋಜರ ಕಾಳಗ ಎಂಬ ಅಣಕು ಯಕ್ಷಗಾನ ಪ್ರಸಂಗವನ್ನು ರಚಿಸುವ ಮೂಲಕ ಮಧ್ಯಸ್ಥರು ತಮ್ಮ ಪ್ರಸಂಗ ರಚನಾ ಸಾಮರ್ಥ್ಯವನ್ನು ಮೆರೆದಿದ್ದಾರೆ.

ಸುಮಾರು 33 ವರ್ಷಗಳ ಕಾಲ ನಿರ್ಮಲಾ ಬಾಲಿಕಾ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಮಧ್ಯಸ್ಥರು ತಮ್ಮ ಸಹೋದ್ಯೋಗಿಗಳ ಹಾಗೂ ವಿದ್ಯಾರ್ಥಿ ಸಮುದಾಯದ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದರು.

ನಿವೃತ್ತಿಯ ನಂತರವೂ ಕ್ರಿಯಾಶೀಲತೆ ಕಾಪಾಡಿಕೊಂಡಿದ್ದ ಕೃಷ್ಣ ಮಧ್ಯಸ್ಥರು ಯಾವುದೇ ಕಲಾ ಪ್ರಕಾರಗಳ ಪ್ರದರ್ಶನವನ್ನು ಪ್ರೇಕ್ಷಕರಾಗಿ ಆಸ್ವಾದಿಸುತ್ತಿದ್ದರು. ರಂಗಪ್ರಸ್ತುತಿಯ ಗುಣಾವಗುಣಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸುತ್ತಿದ್ದರು. ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ, ಪ್ರದರ್ಶನಗಳಲ್ಲಿ ತಾವು ಮೆಚ್ಚಿಕೊಂಡು ಆಸ್ವಾದಿಸಿದ ಸಂಗತಿಗಳನ್ನು ಸಮಾನ ಮನಸ್ಕರ ಜೊತೆ ಹಂಚಿಕೊಂಡು ಸಂಭ್ರಮಿಸುತಿದ್ದರು. ಆರ್ಥಿಕ ವೆಚ್ಚದ ಲೆಕ್ಕಾಚಾರವಿಲ್ಲದೆ ಪ್ರದರ್ಶನ ವೀಕ್ಷಿಸುವ ಏಕೋದ್ದೇಶದಿಂದ ಪರಸ್ಥಳಗಳಿಗೆ ಹೋಗಿ, ಖಾಸಗಿ ವಸತಿ ಗ್ರಹಗಳಲ್ಲಿ ವಾಸ್ತವ್ಯ ಮಾಡಿ ಪ್ರದರ್ಶನ ವೀಕ್ಷಿಸುತ್ತಿದ್ದರು. ಸೃಜನಶೀಲತೆ, ಸಹೃದಯತೆ ಮೇಳವಿಸಿದ್ದ ಮಧ್ಯಸ್ಥರು ನೇತ್ರದಾನ ಮತ್ತು ಅಂಗಾಂಗ ದಾನಗಳ ಮೂಲಕವೂ ತಮ್ಮ ಜೀವನಾದರ್ಶನವನ್ನು ಮಾಡಿಕೊಂಡಿದ್ದಾರೆ. ಮಣಿಪಾಲದ ಆಸ್ಪತ್ರೆಗೆ ಅಂಗಾಂಗಗಳನ್ನು, ಶಿವಮೊಗ್ಗದ ಶಂಕರ್ ಆಸ್ಪತ್ರೆಗೆ ನೇತ್ರಗಳನ್ನು ಕೆ.ಕೆ.ಮಧ್ಯಸ್ಥರು ದಾನ ಮಾಡಿದ್ದಾರೆ. ಕೆಲಕಾಲ
ಗೊರ ಮನೆಯಲ್ಲಿ ವಾಸವಾಗಿದ್ದ ಮಧ್ಯಸ್ಥರು ಅಂತ್ಯ ಕಾಲದಲ್ಲಿ ಸಾಗರದ ಜೋಗ ರಸ್ತೆಯ ಕೆಇಬಿ ಪಕ್ಕದ ವಿನೋಬಾ ನಗರದಲ್ಲಿ ವಾಸವಾಗಿದ್ದರು.

ಎಸ್. ಎನ್. ಪಂಜಾಜೆ ವಿಧಿವಶ

ಎಸ್. ಎನ್. ಪಂಜಾಜೆ ವಿಧಿವಶ

ಎಸ್. ಎನ್. ಪಂಜಾಜೆ ಎಂದೆ ಪ್ರಸಿಸದ್ಧರಾಗಿದ್ದ ಪಂಜಾಜೆ ಸೂರ್ಯನಾರಾಯಣ ಭಟ್ (71) ಇಂದು (22-05-2023) ಇಹಲೋಕ ಯಾತ್ರೆ ಮುಗಿಸಿದರು. ತಾವೇ ಸ್ಥಾಪಿಸಿದ ಕರ್ನಾಟಕ ಸಾಂಸ್ಕøತಿಕ ಕಲಾ ಪ್ರತಿಷ್ಠಾನ (ರಿ.) ಬೆಂಗಳೂರು ಮೂಲಕ 15 ಯಕ್ಷಗಾನ ಸಾಹಿತ್ಯ ಸಮ್ಮೇಳನ ನಡೆಸಿದ್ದರು. ನಾಡಿನ ರಾಜಧಾನಿಯಲ್ಲಿದ್ದು ಯಕ್ಷಗಾನದ ಕಲಿಕೆ, ಪ್ರಸಾರ, ಪ್ರದರ್ಶನ ಮತ್ತು ಚಿಂತನೆಗೆ ಸಂಬಂಧಿಸಿ ಅವರು ಮಾಡಿದ ಕೆಲಸ ದಾಖಲಾರ್ಹವಾದುದು. ಕರ್ನಾಟಕದ ಯಕ್ಷಗಾನ ಪ್ರದೇಶಗಳಲ್ಲದೆ, ಅನ್ಯಾನ್ಯ ಜಿಲ್ಲೆಗಳಲ್ಲಿ, ಮುಂಬೈಯಲ್ಲಿ ಸಮ್ಮೇಳನವನ್ನು ವಿಶಿಷ್ಟವಾಗಿ ನಡೆಸಿದ ಖ್ಯಾತಿಗೆ ಭಾಜನರಾಗಿದ್ದಾರೆ. ಪ್ರತೀ ಸಮ್ಮೇಳನದಲ್ಲೂ ಯಕ್ಷಗಾನ ಹಿರಿಯ ಸಾಧಕರಿಗೆ ಸಮ್ಮೇಳನಾಧ್ಯಕ್ಷ ಪಟ್ಟ ನೀಡಿ, ಹಲವರನ್ನು ಗೌರವಿಸುತ್ತಾ ಸಂತೋಷ ಪಟ್ಟಿದ್ದರು. ಹತ್ತು ವರ್ಷದ ಹಿಂದೆ ಬೆಂಗಳೂರಿನಲ್ಲಿ ನಡೆದ ಯಕ್ಷಗಾನ ಸಮ್ಮೇಳನದಲ್ಲಿ ನಮ್ಮ ಸಂಸ್ಥೆಗೆ ಪ್ರಶಸ್ತಿ ನೀಡಿ ಗೌರವಿಸಿದ್ದರು. ಉಡುಪಿಯಲ್ಲಿ ಜರಗಿದ ಪ್ರಥಮ ಕರ್ನಾಟಕ ಯಕ್ಷಗಾನ ಸಮ್ಮೇಳನದಲ್ಲಿ ಅವರನ್ನು ಸಮ್ಮೇಳನದ ಪ್ರಶಸ್ತಿ ನೀಡಿ ಪುರಸ್ಕರಿಸಿದ ನೆನಪು ಹಸಿರಾಗಿದೆ. ಅವರು ಪತ್ನಿ, ಪುತ್ರ ಮತ್ತು ಅಸಂಖ್ಯಾತ ಯಕ್ಷಗಾನ ಪ್ರೇಮಿಗಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ವಿಶಿಷ್ಟ ಪ್ರತಿಭೆ, ಬಹುಮುಖೀ ಸಾಧಕ, ರಂಗಭೂಮಿ ಮತ್ತು ಯಕ್ಷಗಾನ ಕಲಾವಿದ, ಸಂಘಟನಾ ಚತುರ ಪಂಜಾಜೆ ಸೂರ್ಯನಾರಾಯಣ ಭಟ್ಟರು ಇನ್ನಿಲ್ಲವೆಂಬ ಸುದ್ದಿ ಇದೀಗ ಬಂತು.ಎಸ್.ಎನ್ ಪಂಜಾಜೆ ಎಂದೇ ಖ್ಯಾತರಾದ ಈ ಕಲಾರಾಧಕ ಏಕಾಂಗವೀರರಾಗಿ ಸುಮಾರು ಹದಿನೈದರಷ್ಟು ಅಖಿಲಭಾರತ ಯಕ್ಷಗಾನ ಸಮ್ಮೇಳನಗಳನ್ನು ನಡೆಸಿದ್ದರು. ಕೊನೆಯದನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಸಲು ಯೋಜಿಸಿದ್ದರು. ಯಕ್ಷಗಾನವಲ್ಲದೆ ಅದನ್ನು ಹೊಂದಿಕೊಂಡಿರುವ ಅನೇಕ ಕಲಾಪ್ರಕಾರಗಳ ಪ್ರದರ್ಶನಗಳನ್ನು ನಾಡಿನಾದ್ಯಂತ ಸಂಯೋಜನೆ ಮಾಡಿ ಸೈ ಎನ್ನಿಸಿಕೊಂಡ ಪಂಜಾಜೆ ನಮ್ಮದೇ ಬಳಗದ ಸ್ನೇಹಜೀವಿ. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ಅವರ ಆಕಸ್ಮಿಕ ನಿಧನ ಅನಿರೀಕ್ಷಿತ ದುರ್ವಾರ್ತೆಯಾಗಿ ಅತೀವ‌ ನೋವು ತಂತು. ಅವರಿಗೆ ದೇವರು ಸದ್ಗತಿ ನೀಡಲಿ.

ಭಾಸ್ಕರ ರೈ ಕುಕ್ಕುವಳ್ಳಿ

ಮಿಜಾರು ರಾಮಕೃಷ್ಣ ಶೆಟ್ಟಿಗಾರ್ ನಿಧನ

ಮಿಜಾರು ರಾಮಕೃಷ್ಣ ಶೆಟ್ಟಿಗಾರ್ ನಿಧನ

ತೆಂಕುತಿಟ್ಟಿನ ಹಿರಿಯ ಚಂಡೆ-ಮದ್ದಲೆ ವಾದಕರಾದ ಮಿಜಾರು ರಾಮಕೃಷ್ಣ ಶೆಟ್ಟಿಗಾರ್ (76 ವರ್ಷ) 21-05-2023ರಂದು ಅಶ್ವತ್ಥಪುರದ ಮಿಜಾರಿನಲ್ಲಿ ನಿಧನರಾದರು. ಕೂಡ್ಲು, ಮಂಗಳಾದೇವಿ, ಉಳ್ಳಾಲ ಭಗವತಿ ಮತ್ತು 25 ವರ್ಷಕ್ಕೂ ಮೇಲ್ಪಟ್ಟು ಕಟೀಲು ಮೇಳದಲ್ಲಿ ಹೆಚ್ಚಿನ ಪ್ರಸಿದ್ಧ ಭಾಗವತರಿಗೆ ಚಂಡೆ-ಮದ್ದಲೆ ವಾದಕರಾಗಿ ಕಲಾಸೇವೆಗೈದಿದ್ದರು. ಪೂರ್ವರಂಗದ ಹಾಡುಗಳನ್ನು ಹಾಡುವ ಕ್ರಮವನ್ನು ತಿಳಿದಿದ್ದರು. 2020ರಲ್ಲಿ ಇವರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಗೌರವಿಸಿತ್ತು. ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರನ್ನು ಹಾಗೂ ಅಪಾರ ಕಲಾಭಿಮಾನಿಗಳನ್ನು ಅಗಲಿದ್ದಾರೆ. ಇವರ ಅಗಲಿಕೆಗೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

ರಂಗದಲ್ಲೇ ಹೃದಯಾಘಾತದಿಂದ ಕುಸಿದು ಕಲಾವಿದ ನಿಧನ

ನಿನ್ನೆ 22-12-2022ರಂದು ಕಟೀಲಿನ ಸರಸ್ವತಿ ಸದನದಲ್ಲಿ ತ್ರಿಜನ್ಮ ಮೋಕ್ಷದ ಶಿಶಿಪಾಲನ ಪಾತ್ರದಲ್ಲಿರುವಾಗಲೇ ಕಲಾವಿದ ಪ್ರಸಂಗಕರ್ತ ಗುರುವಪ್ಪ ಬಾಯಾರು (58) ನಿಧನ ಹೊಂದಿದರು. ಕಾಸರಗೋಡು ಸಮೀಪದ ಬಾಯಾರಿನ ಕರಿಯ ದೇವಾಡಿಗ – ಸರಸ್ವತೀ ದಂಪತಿ ಮಗನಾದ ಗುರುವಪ್ಪರು 10ನೇ ತರಗತಿಯವರೆಗೆ ಓದಿ ಉಪಜೀವಿತಕ್ಕೆ ಹೋಟೆಲ್‍ನಲ್ಲಿ ಉದ್ಯೋಗಿಯಾಗಿದ್ದರು. ಎಳವೆಯಲ್ಲೇ ಯಕ್ಷಗಾನಾಸಕ್ತರಾದ ಇವರು ಕಾವೂರು ಕೇಶವರಿಂದ ಯಕ್ಷಗಾನ ನಾಟ್ಯಭ್ಯಾಸ ಮಾಡಿದ್ದರು. ಡಾ. ಶಿಮಂತೂರು ನಾರಾಯಣ ಶೆಟ್ಟರಲ್ಲಿ ಛಂದಸ್ಸು ಅಧ್ಯಯನ ಮಾಡಿ ತುಳುವಿನಲ್ಲಿ ಅತ್ಯಂತ ಪ್ರಸಿದ್ಧಿ ಪಡೆದ ಗಟ್ಟದ ಗರುಡೆ ಸಹಿ10ಕ್ಕೂ ಹೆಚ್ಚು ಪ್ರಸಂಗಗಳನ್ನು ರಚಿಸಿದ್ದಾರೆ. ತೆಂಕುತಿಟ್ಟಿನ ಕುಂಬಳೆ, ಮಂಗಳಾದೇವಿ ಹಾಗೂ ಪುತ್ತೂರು ಮೇಳಗಳಲ್ಲಿ ಇವರ ಪ್ರಸಂಗಗಳು ಜಯಭೇರಿ ಬಾರಿಸಿದ್ದವು. ಗಣೇಶಪುರ, ಸಸಿಹಿತ್ಲು, ಬಪ್ಪನಾಡು ಮೇಳಗಳಲ್ಲಿ ತಿರುಗಾಟ ಮಾಡಿ ಕಿರೀಟ ವೇಷಧಾರಿಯಾಗಿ ಗುರುತಿಸಿಕೊಂಡಿದ್ದರು. ಕಳೆದ 9 ವರ್ಷಗಳಿಂದ ಕಟೀಲು ಮೇಳದಲ್ಲಿ ವೇಷಧಾರಿಯಾಗಿ ಸೇವೆಸಲ್ಲಿಸುತ್ತಿದ್ದರು. ದೇವಿ ಮಹಾತ್ಮೆಯ ಮಧುಕೈಟಪ, ದೇವೇಂದ್ರ, ವಿದ್ಯುನ್ಮಾಲಿ, ಶತೃಘ್ನ ಮೊದಲಾದ ಪಾತ್ರಗಳು ಇವರಿಗೆ ವಿಶೇಷ ಕೀರ್ತಿ ತಂದಿವೆ. ಹೆಂಡತಿ ಮತ್ತು ನಾಲ್ಕು ಗಂಡು ಮಕ್ಕಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಅಪಘಾ ತ: ಯಕ್ಷಗಾನ ಭಾಗವತ ತಿಮ್ಮಪ್ಪಬಾಳೆಹದ್ದ ನಿಧನ

ಅಪಘಾ ತ: ಯಕ್ಷಗಾನ ಭಾಗವತ ತಿಮ್ಮಪ್ಪ
ಬಾಳೆಹದ್ದ ನಿಧನ

ಯಕ್ಷಗಾನ ಭಾಗವತಿಕೆ ಹಾಗೂ ಸಂಗೀತದಲ್ಲಿ ಅಪಾರ ಜ್ಞಾನ ಹೊಂದಿದ್ದ, ತಾಲ್ಲೂಕಿನ ತಿಮ್ಮಪ್ಪ ಭಾಗವತ ಬಾಳೆಹದ್ದ (59), ಎರಡು ಕಾರುಗಳ ನಡುವೆ ನಡೆದ ಅಪಘಾ ತದಲ್ಲಿ ಮಂಗಳವಾರ ಸಂಜೆ ನಿಧನರಾದರು. ತಾಲ್ಲೂಕಿನ ಹಿತ್ಲಳ್ಳಿ ಬಳಿ ಅವರಿದ್ದ ಕಾರಿಗೆ, ಎದುರಿನಿಂದ ಬಂದ ಕಾರು ಡಿಕ್ಕಿಯಾಗಿ ಗಂಭೀರ ಸ್ವರೂಪದಿಂದ ಗಾಯಗೊಂಡಿದ್ದರು.

ತಂದೆ, ಪ್ರಸಿದ್ಧ ಭಾಗವತರಾಗಿದ್ದ ಕೃಷ್ಣ ಭಾಗವತ ಅವರ ಬಳಿ ಭಾಗವತಿಕೆ ಕಲಿತ ಇವರು, ಬಾವ ಶ್ರೀ ಪಾದ ಹೆಗಡೆ ಕಂಪ್ಲಿ ಅವರ ಬಳಿ ಸಂಗೀತ ಜ್ಞಾನ ಪಡೆದಿದ್ದರು. ಹೊಸ್ತೋ ಟ ಮಂಜುನಾಥ ಭಾಗವತರ ಶಿಷ್ಯರಾಗಿದ್ದ ಇವರು ಸೋಂದಾದ ಯಕ್ಷಗಾನ ಬಳಗದಲ್ಲಿ ಗುರುತಿಸಿಕೊಂಡಿದ್ದರು.

ರಂಗಭೂಮಿಗೆ ಸಂಗೀತ ನೀಡುತ್ತಿದ್ದ ಇವರು ರಂಗಾಯಣದ ಮೂಲಕ ಖೈದಿಗಳಿಗೆ ನಾಟಕ ಕಲಿಸುವ ತಂಡದಲ್ಲಿ ಸಕ್ರಿಯರಾಗಿದ್ದರು. ಇವರಿಗೆ ಒಬ್ಬ ಪುತ್ರ, ಒಬ್ಬ ಪುತ್ರಿ ಇದ್ದಾರೆ.

ಚಿಂತಕ ಹಾಗೂ ಸಾಮಾಜಿಕ ಹೋರಾಟಗಾರ ಜಿ.ರಾಜಶೇಖರ ನಿಧನ

ಚಿಂತಕ ಹಾಗೂ ಸಾಮಾಜಿಕ ಹೋರಾಟಗಾರ ಜಿ.ರಾಜಶೇಖರ ನಿಧನ

ಚಿಂತಕ ಹಾಗೂ ಸಾಮಾಜಿಕ ಹೋರಾಟಗಾರ ಜಿ.ರಾಜಶೇಖರ ಬುಧವಾರ ನಗರದ ಆದರ್ಶ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಜಿ.ರಾಜಶೇಖರ ಅವರಿಗೆ ಹಲವು ದಿನಗಳಿಂದ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ದಿನದಿಂದ ದಿನಕ್ಕೆ ಆರೋಗ್ಯ ಸ್ಥಿತಿ ಬಿಗಡಾಯಿಸುತ್ತಲೇ ಇತ್ತು. ಕೊನೆಗೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು.

ಪ್ರಮುಖ ಸಾಮಾಜಿಕ ಹೋರಾಟಗಾರು ಹಾಗೂ ಚಿಂತಕರಾಗಿದ್ದ ಜಿ.ರಾಜಶೇಖರ ಜನಪರ ಚಳವಳಿಗಳನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿದ್ದರು. ಕರಾವಳಿಯ ಕೋಮುವಾದದ ವಿರುದ್ಧ ಗಟ್ಟಿಯಾಗಿ ಧನಿ ಎತ್ತುತ್ತಿದ್ದರು.

ನೇರ ನಡೆ ನುಡಿಗೆ ಹೆಸರಾಗಿದ್ದ ಅವರು ಜೀವನದುದ್ದಕ್ಕೂ ಸರಳ ವ್ಯಕ್ತಿತ್ವ ಹಾಗೂ ಆಡಂಬರವಿಲ್ಲದ ಜೀವನ ಶೈಲಿ ಪಾಲಿಸಿದವರು.

ಜಿ.ರಾಜಶೇಖರ 2019ರಲ್ಲಿ ಬಿದ್ದು ತಲೆಗೆ ಗಂಭೀರ ಪೆಟ್ಟುಬಿದ್ದಿತ್ತು ಪರೀಕ್ಷೆಗೊಳಪಡಿಸಿದಾಗ ಅವರಿಗೆ ಪ್ರೊಗ್ರೆಸಿವ್ ಸುಪ್ರ ನ್ಯೂಕ್ಲಿಯರ್ ಪಾಲ್ಸಿ ಎಂಬ ಅಪರೂಪದ ಪಾರ್ಕಿನ್‌ಸನ್ಸ್‌ ಕಾಯಿಲೆ ಇರುವುದು ದೃಢಪಟ್ಟಿತ್ತು. ಮಿದುಳಿಗೆ ಸಂಬಂಧಪಟ್ಟ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹಂತ ಹಂತವಾಗಿ ನೆನಪಿನ ಶಕ್ತಿ ಕಳೆದುಕೊಂಡಿದ್ದರು. ದೇಹದ ಭಾಗಗಳು ಸ್ವನಿಯಂತ್ರಣ ಕಳೆದುಕೊಂಡಿದ್ದವು.

ಮಾತನಾಡಲು ಹಾಗೂ ನಡೆದಾಡಲು ಸಾದ್ಯವಾಗದ ಸ್ಥಿತಿ ತಲುಪಿದ ಬಳಿಕ ಸಾರ್ವಜನಿಕ ಸಭೆ, ಹೋರಾಟ ಹಾಗೂ ಪ್ರತಿಭಟನೆಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸಿದ್ದರು. ಕೊನೆಗೆ ನಡೆಯಲೂ ಸಾಧ್ಯವಾಗದೆ ಹಾಗೂ ಆಹಾರ ನುಂಗಲಾಗದೆ ದೀರ್ಘ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ಕೊನೆಯುಸಿರೆಳೆದರು.

ಜಿ.ರಾಜಶೇಖರ ಅವರ ಪಾರ್ಥಿವ ಶರೀರವನ್ನು ಗುರುವಾರ ಬೆಳಿಗ್ಗೆ 8 ಗಂಟೆಗೆ ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣ ಸಮೀಪದಲ್ಲಿರುವ ಸಂಬಂಧಿಕರ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಹತ್ತು ಗಂಟೆಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕಾಡಮಲ್ಲಿಗೆ ಖ್ಯಾತಿಯ ಬೆಳ್ಳಾರೆ ವಿಶ್ವನಾಥ ರೈ ಇನ್ನಿಲ್ಲ

ಕಾಡಮಲ್ಲಿಗೆ ಖ್ಯಾತಿಯ ಬೆಳ್ಳಾರೆ ವಿಶ್ವನಾಥ ರೈ ಇನ್ನಿಲ್ಲ

ಬೆಳ್ಳಾರೆ ಸುಬ್ಬಯ್ಯ ರೈ ಮತ್ತು ಮಂಜಕ್ಕೆ ಇವರ ನಾಲ್ವರು ಮಕ್ಕಳಲ್ಲಿ ವಿಶ್ವನಾಥ ರೈ ಒಬ್ಬರು ಇವರು 28-2-1949 ರಲ್ಲಿ ಬೆಳ್ಳಾರೆಯಲ್ಲಿ ಜನಿಸಿದರು ಶಿಕ್ಷಣ 2 ನೇ ತರಗತಿ ಇಬ್ಬರು ಅಕ್ಕಂದಿರು ಒಬ್ಬಾಕೆ ತಂಗಿ. ಅಚ್ಚುತ ಮಣಿಯಾಣಿ ಯವರಿಂದ ಯಕ್ಷ ನಾಟ್ಯಾಭ್ಯಾಸ ಮಾಡಿ ತನ್ನ 9ನೇ ವರ್ಷ ಪ್ರಾಯದಲ್ಲಿ ರಂಗಪ್ರವೇಶ ಮಾಡಿದರು ರಾಜನ್ ಅಯ್ಯರ್ ಮತ್ತು ಕೇಶವ ಮಾಸ್ತರ್ ಅವರಿಂದ ಭರತನಾಟ್ಯವನ್ನೂ ಅಭ್ಯಾಸ ಮಾಡಿದರು. ಬಾಲಕನಿದ್ದಾಗಲೇ ತನ್ನ ಅಭಿನಯಕ್ಕೆ ಮಾಸ್ಟರ್ ಹಿರಣ್ಣಯ್ಯರಿಂದ ಚಿನ್ನದ ಉಂಗುರದ ಸನ್ಮಾನ ಸ್ವೀಕರಿಸಿದ್ದಾರೆ.

ಕರ್ನಾಟಕ ಮೇಳ ಒಂದರಲ್ಲೇ 35 ವರುಷಗಳ ತಿರುಗಾಟ ಮಾಡಿದ್ದಾರೆ. ಉಳಿದಂತೆ ಮಧೂರು ಮೇಳ 1 ವರುಷ ಸುರತ್ಕಲ್ ಮೇಳ 5 ವರುಷ. ಕದ್ರಿ ಮೇಳ 2 ವರುಷ. ಬಪ್ಪನಾಡು 1 ವರುಷ. ಕುಂಟಾರು ಮೇಳ 2 ವರುಷ. ಎಡನೀರು 1 ವರುಷ ಕಟೀಲು ಮೇಳ 3 ವರುಷ ತಿರುಗಾಟ ಮಾಡಿದ್ದಾರೆ. ಇವರು ಅಲ್ಪ ಕಾಲದ ಅನಾರೋಗ್ಯದಿಂದ ಕಳೆದ ರಾತ್ರಿ ಬೆಳ್ಳಾರೆಯ ಸ್ವಗ್ರಹದಲ್ಲಿ ಇಹಲೋಕ ತ್ಯಜಿಸಿದರು. ಅವರ ಪಾರ್ಥಿವ ಶರೀರದ ಅಂತ್ಯ ಕ್ರಿಯೆ ಬೆಳ್ಳಾರೆಯಲ್ಲಿ ಜರಗಲಿದೆ.

error: Content is protected !!
Share This