ಕರ್ನಾಟಕ ಯಕ್ಷಗಾನ ಅಕಾಡೆಮಿಯ ನೇತೃತ್ವದಲ್ಲಿ ತೆಂಕುತಿಟ್ಟು ಯಕ್ಷಗಾನ ಬಣ್ಣಗಾರಿಕೆ-ನೃತ್ಯಗಾರಿಕೆ ಶಿಬಿರ ಅ.7ರಂದು ಕೋಳ್ಯೂರು ಶಂಕರನಾರಾಯಣ ದೇವಾಲಯದ ಮಹಾಗಣಪತಿ ಸಭಾ ಭವನದಲ್ಲಿ ನಡೆಯಲಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ನ್ಯಾಯವಾದಿ ದಾಮೋದರ ಶೆಟ್ಟಿ ಉದ್ಘಾಟಿಸುವರು. ಹಿರಿಯ ಯಕ್ಷಗಾನ ಕಲಾವಿದ ದಶಾವತಾರಿ ಕೆ. ಗೋವಿಂದ ಭಟ್ ಸೂರಿಕುಮೇರಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ನಿವೃತ್ತ ಮುಖ್ಯೋಪಾಧ್ಯಾಯ ಕೆ.ತಿಮ್ಮಣ್ಣ ಭಟ್ ಕೊಮ್ಮೆ, ನ್ಯಾಯವಾದಿ ವಿಠಲ ಭಟ್ ಮೊಗಸಾಲೆ, ವೈದ್ಯ ಡಾ.ಬಾಲಸುಬ್ರಹ್ಮಣ್ಯ ಭಟ್, ನಾಟ್ಯಗುರು ಅಶ್ವತ್ ಮಂಜನಾಡಿ, ಕಲಾವಿದ ಮಹಾಬಲೇಶ್ವರ ಭಟ್, ಕೆ. ಕೊಮ್ಮೆ ಭಾಗಮಂಡಲ ಉಪಸ್ಥಿತರಿದ್ದು ಶುಭಹಾರೈಸುವರು. ಪ್ರತಿ ಆದಿತ್ಯವಾರ ಬೆಳಗ್ಗೆ 10 ರಿಂದ 12ರ ವರೆಗೆ ಬಣ್ಣಗಾರಿಕೆ-ನೃತ್ಯಗಾರಿಕೆಯ ವಿಶೇಷ ತರಬೇತಿಗಳು ಅಕಾಡೆಮಿ ನೇತೃತ್ವದಲ್ಲಿ ನಡೆಯಲಿದ್ದು, ಆಸಕ್ತರು ಹೆಚ್ಚಿನ ಮಾಹಿತಿಗೆ ಸಂಯೋಜಕ ಕಿಶೋರ್ ಭಟ್ ಕೊಮ್ಮೆ ಅವರನ್ನು ಸಂಪರ್ಕಿಸಲು ವಿನಂತಿಸಲಾಗಿದೆ.
– ಉದಯವಾಣಿ
