ಖ್ಯಾತ ಅರ್ಥಧಾರಿಗಳಾದ ಪ್ರಭಾಕರ ಜೋಶಿಯವರ ಒಂದು ವಿಶಿಷ್ಟವಾದ ಆಹ್ವಾನ ಪತ್ರಿಕೆ ರಚಿಸಿ ಕಳುಹಿಸಿದ್ದಾರೆ. ಮೇ 25ರಿಂದ ಮೇ 31ರ ತನಕ ಏಳು ದಿನಗಳ ಕಾಲ ತಾಳಮದ್ದಲೆ ಸಪ್ತಾಹ ನಡೆಯುತ್ತದೆ. ತೆಂಕು-ಬಡಗಿನ ಪ್ರಸಿದ್ದ ಹಿಮ್ಮೇಳದಲ್ಲಿ ಮಾತಿನ ಮಲ್ಲರ ವಾಕ್ಚಾತುರ್ಯ ಇರುತ್ತದೆ. ಆದರೆ ಈ ಕಾರ್ಯಕ್ರಮಕ್ಕೆ ಯಾರೂ ಬರಬೇಡಿ. ಕಲಾವಿದರನ್ನು ಬಿಟ್ಟು ಬೇರೆ ಯಾರಿಗೂ ಕಾರ್ಯಕ್ರಮ ನಡೆಯುವ ಜಾಗಕ್ಕೆ ಪ್ರವೇಶ ಇಲ್ಲ. ಹಿಂದೆಲ್ಲ ಕಾರ್ಯಕ್ರಮಕ್ಕೆ ಬನ್ನಿ ಬನ್ನಿ ಬನ್ನಿ ಅಂತ ಕರೆಯುತ್ತಿದ್ದವರು ಈಗ ಇದ್ದಕ್ಕಿದ್ದಂತೆ ಬರಬೇಡಿ ಅಂತ ಹೇಳುತ್ತಿರುವುದು ಹೊಸ ಶೈಲಿ.
ಇದು ಕೇವಲ ಯಕ್ಷಗಾನಕ್ಕೆ ಮಾತ್ರವಲ್ಲ, ಎಲ್ಲಕ್ಕೂ ಅನ್ವಯ. ಆನ್ಲೈನಲ್ಲಿ ಕತೆ ಓದುವುದು, ಕವಿತೆ ಓದುವುದು, ಭಾಷಣ ಮಾಡುವುದು, ಸಂವಾದ ಮಾಡುವುದು, ಚರ್ಚೆ ನಡೆಸುವುದು ಆರಂಭವಾಗಿ ಯಶಸ್ವಿಯ ಆಗಿದೆ. ಹತ್ತಿರವಿದ್ದೂ ದೂರ ನಿಲ್ಲುವೆವು, ನಮ್ಮ ಅಹಮ್ಮಿನ ಕೋಟೆಯಲಿ ಎಂಬ ಕವಿಸಾಲನ್ನು ಹೀಗೆ ಬದಲಾಯಿಸೋಣ. ಹತ್ತಿರವಿದ್ದೂ ದೂರ ನಿಲ್ಲುವೆವು, ನಮ್ಮ ಸುರಕ್ಷಿತ ಕೋಟೆಯಲಿ!
(ಕನ್ನಡ ಪ್ರಭಾ)