– ಪ್ರೊ.ಎಸ್.ವಿ. ಉದಯ ಕುಮಾರ ಶೆಟ್ಟಿ

ಯಕ್ಷಗಾನದ ತೆಂಕು ಬಡಗುತಿಟ್ಟುಗಳ ಸವ್ಯಸಾಚಿ ಸ್ತ್ರೀ ವೇಷಧಾರಿ, ಯಕ್ಷಗಾನಕ್ಕೆ ಗಣನೀಯ ಕೊಡುಗೆ ನೀಡಿದ ಹಾರಾಡಿ ಮತ್ತು ಉದ್ಯಾವರ ಗಾಣಿಗ ಕುಟುಂಬದ ಪ್ರಾತಿನಿಧಿಕ ಕಲಾವಿದ. ದೀರ್ಘಕಾಲ ಶ್ರೀಕ್ಷೇತ್ರ ಧರ್ಮಸ್ಥಳ ಮೇಳವೊಂದರಲ್ಲೇ ತಿರುಗಾಟ ಮಾಡಿದ ಹಿರಿಯ ಕಲಾವಿದ ಉದ್ಯಾವರ ಜಯಕುಮಾರ ಗಾಣಿಗರು ಇಹ ಲೋಕ ತ್ಯಜಿಸಿದ್ದಾರೆ. ಕೆಲವು ವರ್ಷಗಳಿಂದ ತೀವ್ರ ಕಾಯಿಲೆಯಿಂದ ಬಳಲುತ್ತಿದ್ದ ಅವರು ತನ್ನ 66ನೇ ವಯಸ್ಸಿನಲ್ಲಿ (ಡಿ.12ರಂದು) ಉಡುಪಿಯಲ್ಲಿ ನಿಧನರಾದರು. ಕಷ್ಟಗಳು ಬಂದರೆ
ಒಂದರ ಮೇಲೊಂದು ಬರುತ್ತವೆ ಎನ್ನುವುದು ಗಾಣಿಗರ ಜೀವನದಲ್ಲಿ ಅಕ್ಷರಶಃ ಸತ್ಯವಾಗಿದೆ. ದುಡಿಯುವ ಕೈ ಇದ್ದ ಏಕಮಾತ್ರ ಪುತ್ರ ಮೊನ್ನೆ ಮೊನ್ನೆ ಅಪಘಾತದಲ್ಲಿ ಇಹಲೋಕ ತ್ಯಜಿಸಿದ್ದಾನೆ. ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ವರಿಗೆ ಇದೊಂದು ಬಹುದೊಡ್ಡ ಆಘಾತವಾಗಿತ್ತು.

ಬಡಗುತಿಟ್ಟಿನ ದಂತಕಥೆ ಹಾರಾಡಿ ಮನೆತನದ ಕುಷ್ಠ ಗಾಣಿಗರ 37 ಮಂದಿ ಮೊಮ್ಮಕ್ಕಳಲ್ಲಿ ಹಿರಿಯವರಾದ ಇವರೊಬ್ಬರೇ ಯಕ್ಷಗಾನ ರಂಗವನ್ನು ಆರಿಸಿಕೊಂಡವರು. ಜೋಡು ಮುಂಡಾಸು ಖ್ಯಾತಿಯ, ಸ್ತ್ರೀ ಪಾತ್ರ, ಪುರುಷ ಪಾತ್ರಗಳಲ್ಲಿ ಸೈ ಎನಿಸಿಕೊಂಡ. ಸುರತ್ಕಲ್ ಮೇಳದ ಯಜಮಾನರ ಪ್ರತಿನಿಧಿಯಾಗಿ ಮೇಳದ ಆಗುಹೋಗುಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸವ್ಯಸಾಚಿ ಕಲಾವಿದ ಇವರು. ಸುಮಾರು ಐದು ದಶಕಗಳ ಕಾಲ ಕಲಾಸೇವೆ ಮಾಡಿದ ಉದ್ಯಾವರ ಬಸವ ಗಾಣಿಗರು ಜಯಕುಮಾರರ ತಂದೆ, ಆರಂಭದಲ್ಲಿ ಕಾಲಿಗೆ ಗೆಜ್ಜೆ ಕಟ್ಟಿ ಬಾಯ್ತುಂಬ ಹರಸಿದವರು ಇವರ ಮಾವ ಖ್ಯಾತ ಮದ್ದಳೆ ವಾದಕ ಮಂದಾರ್ತಿ ಸಮೀಪದ ಸುರ್ಗಿಕಟ್ಟೆ ಬಸವ ಗಾಣಿಗರು. ಇಂತಹ ತುಂಬು ಯಕ್ಷಗಾನ ಕುಟುಂಬದ ಹಿನ್ನೆಲೆಯಿಂದ ಬಂದ ಜಯಕುಮಾರರನ್ನು ಯಕ್ಷಗಾನರಂಗ ಕೈಬೀಸಿ ಕರೆದದ್ದು ವಿಶೇಷವಲ್ಲ.

ಉಡುಪಿ ತಾಲೂಕಿನ ಹಾರಾಡಿಯಲ್ಲಿ ಉದ್ಯಾವರ ಬಸವ ಗಾಣಿಗ ಮತ್ತು ಹಾರಾಡಿ ಲಕ್ಷ್ಮೀ ಅವರ ಪುತ್ರನಾಗಿ ಜನಿಸಿದ ಜಯಕುಮಾರರು ಏಳನೇ ತರಗತಿ ಓದುತ್ತಿರುವಾಗಲೇ ಹಾರಾಡಿ ಮನೆತನದ ರಾಮಗಾಣಿಗರು. ಕುಷ್ಠ ಗಾಣಿಗರು ನಾರಾಯಣ ಗಾಣಿಗರು, ಮಹಾಬಲ ಗಾಣಿಗರಂತವರು ಮಂದಾರ್ತಿ ಮೇಳದಲ್ಲಿ ಮರೆಯುತ್ತಿರುವುದನ್ನು ಕಂಡವರು. ಇವರೆಲ್ಲರಿಂದ ಪ್ರೇರೇಪಿತರಾದ ಅವರು ಗುರು ವೀರಭದ್ರ ನಾಯಕರಿಂದ ಬಡಗುತಿಟ್ಟಿನ ಹೆಜ್ಜೆಗಾರಿಕೆಯನ್ನೂ, ಧರ್ಮಸ್ಥಳ ಕೇಂದ್ರದಿಂದ ಕುರಿಯ ವಿಠಲಶಾಸ್ತ್ರೀ ಮತ್ತು ಪಡ್ರೆ ಚಂದು ಅವರಿಂದ ತೆಂಕುತಿಟ್ಟು ಹೆಜ್ಜೆಗಾರಿಕೆ ಕಲಿತು, ತಂದೆ ಬಸವ ಗಾಣಿಗರು ಸೇವೆ ಸಲ್ಲಿಸುತ್ತಿದ್ದ ವರದರಾಯಪೈಗಳ ಯಜಮಾನಿಕೆಯ ಸುರತ್ಕಲ್ ಮೇಳದಲ್ಲಿ ಗೆಜ್ಜೆ ಕಟ್ಟಿದರು. ನಂತರ ತೆಂಕುತಿಟ್ಟಿನ ಪ್ರಸಿದ್ಧ ಮೇಳ ಹಾಗೂ ಮೇರು ಕಲಾವಿದರಿದ್ದ ಧರ್ಮಸ್ಥಳ ಮೇಳಕ್ಕೆ ಸೇರ್ಪಡೆಗೊಂಡರು.

ಕುಂಬ್ಳೆ ಸುಂದರ ರಾವ್, ಕೆ.ಗೋವಿಂದ ಭಟ್, ಎಂಪೆಕಟ್ಟೆ ರಾಮಯ್ಯ ರೈ, ಪುತ್ತೂರು ನಾರಾಯಣ ಹೆಗಡೆ, ಕುಂಬ್ಳೆ ಶ್ರೀಧರ ರಾವ್, ಕಡತೋಕ ಮಂಜುನಾಥ ಭಾಗವತರು, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ ಮುಂತಾದ ಘಟಾನುಘಟಿ ಕಲಾವಿದರಿದ್ದ ಧರ್ಮಸ್ಥಳ ಮೇಳದಲ್ಲಿ 30 ವರ್ಷ ದೀರ್ಘ ಕಾಲ ಕಲಾಸೇವೆ ಸಲ್ಲಿಸಿದರು. ಇದಕ್ಕೆ ಪೂಜ್ಯ ಹೆಗ್ಗಡೆಯವರ ಪ್ರೀತಿ ಮತ್ತು ಕಡತೋಕ

ಮಂಜುನಾಥ ಭಾಗವತರ ಸಹಕಾರವೇ ಕಾರಣ ಎಂದು ಅವರನ್ನು ಕೃತಜ್ಞತೆಯಿಂದ ನೆನೆಯುತ್ತಿದ್ದರು. ‘ತೀವ್ರ ಅನಾರೋಗ್ಯದಿಂದ ಮೇಳ ಬಿಡುವ ಕಾಲದಲ್ಲೂ ಹೆಗ್ಗಡೆಯವರು ನನ್ನ ಕೈಬಿಡಲಿಲ್ಲ’ ಎಂಬುದು ಅವರ ಮನದಾಳದ ಮಾತು. ದೀರ್ಘಕಾಲ ಪ್ರಧಾನ ಸ್ತ್ರೀ ವೇಷಧಾರಿಯಾಗಿ ಧರ್ಮಸ್ಥಳ ಮೇಳದಲ್ಲಿ ಅವರು ನಿರ್ವಹಿಸುತ್ತಿದ್ದ ಕ್ಷೇತ್ರ ಮಹಾತ್ಮೆಯ ಅಮ್ಮುದೇವಿ, ಮಾಲತಿ, ದಕ್ಷಯಜ್ಞದ ದಾಕ್ಷಾಯಣಿ, ಶ್ರೀದೇವಿ, ಕಯಾದು, ಸೀತೆ, ಶಶಿಪ್ರಭೆ, ದಮಯಂತಿ, ಗುಣಸುಂದರಿ ಮುಂತಾದ ಪಾತ್ರಗಳು ಅಪಾರ ಜನಮನ್ನಣೆ ಪಡೆದಿದ್ದವು, ಕುಂಬ್ಳೆ ಸುಂದರ ರಾಯರ, ಈಶ್ವರ ಗೋವಿಂದ ಭಟ್ಟರ ದಕ್ಷನ ಪಾತ್ರಕ್ಕೆ ಇವರ ದಾಕ್ಷಾಯಣಿಯ ಪಾತ್ರ ಪ್ರೇಕ್ಷಕರು ಬಹುಕಾಲ ನೆನಪಿಸಿಕೊಳ್ಳುವಂತಹುದಾಗಿತ್ತು.

41 ವರ್ಷಗಳ ಕಾಲ ಧರ್ಮಸ್ಥಳ, ಸುರತ್ಕಲ್, ಎಡನೀರು, ಕದ್ರಿ ಅಲ್ಲದೇ ಬಡಗಿನ ಸಾಲಿಗ್ರಾಮ, ಮಾರಣಕಟ್ಟೆ, ಸೌಕೂರು ಮೇಳಗಳಲ್ಲಿ ಸೇವೆ ಸಲ್ಲಿಸಿ ಅನಾರೋಗ್ಯದಿಂದ ನಿವೃತ್ತರಾದ ಜಯಕುಮಾರರು, ತೆಂಕು ಬಡಗು ತಿಟ್ಟುಗಳ ಅಗ್ರಮಾನ್ಯ ಕಲಾವಿದರ ಒಡನಾಟ, ಅತಿ ಎನಿಸದ ಸಂಪ್ರದಾಯಬದ್ಧ ಪರಿಷ್ಕೃತವಾದ ಮಾತುಗಾರಿಕೆ, ಯಾವ ವೇಷಕ್ಕೂ ಹೊಂದುವ ಆಳಂಗ, ಸ್ತ್ರೀ ಸಹಜ ಒನಪು ವಯ್ಯಾರ, ಅವಶ್ಯವಿದ್ದಾಗ ಯಾವುದೇ ವೇಷಕ್ಕೆ ಸೈ ಎನಿಸಿ ಮೇಳವೊಂದಕ್ಕೆ ಅತ್ಯುಪಯುಕ್ತ ಕಲಾವಿದರಾಗಿದ್ದರು. ಇವರು ಕಾಯಿಲೆ ಬಿದ್ದಾಗ ಚೈತನ್ಯ ತುಂಬಿ ಹರಸಿದ ಹೆಗ್ಗಡೆ ಅವರು ಧರ್ಮಸ್ಥಳದಿಂದ ಆರ್ಥಿಕ ನೆರವು ನೀಡುತ್ತಿದ್ದರು. ‘ಮೇಳದ ಸಂಚಾಲಕರಾಗಿದ್ದ ಹರ್ಷೇಂದ್ರ ಕುಮಾರರು ಧೈರ್ಯ ತುಂಬಿ ಆಶೀರ್ವಾದ ಮಾಡಿದ್ದಾರೆ’ ಎಂದು ಕ್ಷೇತ್ರವನ್ನು ತನ್ನ ಅಂತ್ಯ ಕಾಲದವರೆಗೂ ಸ್ಮರಿಸುತ್ತಿದ್ದರು. ಅವರಿಗೆ 2013ರ ಸಾಲಿನ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ, ತೋನ್ಸೆ ಕಾಂತಪ್ಪ ಮಾಸ್ತರ್ ಪ್ರಶಸ್ತಿ ಸಹಿತ ಹಲವಾರು ಸನ್ಮಾನಗಳು ಲಭಿಸಿವೆ. ರಂಗದಿಂದ ನಿವೃತ್ತಿ ಬಳಿಕ ಕಲಾವಿದರ ಜೀವನ ಕಷ್ಟ ಎನ್ನುವುದಕ್ಕೆ ಜ್ವಲಂತ ಉದಾಹರಣೆಯಾದ ಗಾಣಿಗರ ನಿಧನವು ಬಡಗು ಹಾಗೂ ತೆಂಕುತಿಟ್ಟಿನ ಸ್ತ್ರೀ ವೇಷ ಪರಂಪರೆಗೆ ತುಂಬಲಾರದ ನಷ್ಟವಾಗಿದೆ.

error: Content is protected !!
Share This